
RAIN: ಫೆಂಗಲ್ ಅಬ್ಬರಕ್ಕೆ ಕರಾವಳಿ ಜನ ಕಂಗಾಲ್!!
ಪುತ್ತೂರು: ಫೆಂಗಲ್ ಅಬ್ಬರಕ್ಕೆ ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿದ್ದು, ಅಲ್ಲೋಲ ಕಲ್ಲೋಲವಾಗಿದೆ. ಇದರಿಂದಾಗಿ ಮಂಗಳೂರಿಗೂ ಜಲಕಂಟಕ ಉಂಟಾಗಿದೆ. ಕಾಸರಗೋಡಿನಲ್ಲಿ ಧಾರಾಕಾರ ಮಳೆಯುಂಟಾಗುತ್ತಿದ್ದು, ಕೃತಕ ನೆರೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತಗೊಂಡಿದೆ. ಕುಂಬ್ಳೆ ಸೇರಿದಂತೆ ಉಪ್ಪಳ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜನವಸತಿ ಪ್ರದೇಶಗಳಿಗೂ ನೆರೆ ನೀರು ನುಗ್ಗಿದೆ. ಅಡಿಕೆ ತೆಂಗು ಸೇರಿದಂತೆ ಕೃಷಿಗೂ ಭಾರೀ ಹಾನಿಯುಂಟಾಗಿದೆ. ಹೆದ್ದಾರಿಯಲ್ಲಿ ಕೃತಕ ನೆರೆ ಪರಿಣಾಮ ವಾಹನ ಸವಾರರು ಪರದಾಟುವಂತಾಯಿತು.
ಇನ್ನು ಕರಾವಳಿಯಲ್ಲಿ ಫೆಂಗಲ್ ಚಂಡಮಾರುತದ ಆರ್ಭಟಕ್ಕೆ ಮಂಗಳೂರಿನ ಸಮುದ್ರ ತೀರಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆ ಎಲ್ಲಾ ಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸೈಕ್ಲೋನ್ ಎಫೆಕ್ಟ್ ನಿಂದಾಗಿ ಮಂಗಳೂರಿನ ಸಮುದ್ರ ತೀರಗಳು ಪ್ರಕ್ಷುಬ್ಧಗೊಂಡಿದೆ. 35 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿರುವ ಪರಿಣಾಮ ಸಮುದ್ರ ಹಾಗೂ ನದಿ ತೀರದ ಜನರು ಎಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ನೆರೆ ಪೀಡಿತ ಹಾಗೂ ತಗ್ಗು ಪ್ರದೇಶಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ.