-->
ಮದ್ಯ ಮುಕ್ತ ಗ್ರಾಮದಲ್ಲಿ ವೈನ್ ಶಾಪ್; ಸಿಡಿದೆದ್ದ ಗ್ರಾಮಸ್ಥರು, ಬೃಹತ್ ಪ್ರತಿಭಟನೆ!

ಮದ್ಯ ಮುಕ್ತ ಗ್ರಾಮದಲ್ಲಿ ವೈನ್ ಶಾಪ್; ಸಿಡಿದೆದ್ದ ಗ್ರಾಮಸ್ಥರು, ಬೃಹತ್ ಪ್ರತಿಭಟನೆ!



ಸುಳ್ಯ: ಕೊಲ್ಲಮೊಗ್ರ ಗ್ರಾಮದಲ್ಲಿ ತಲೆ ಎತ್ತಿರುವ ಮದ್ಯದಂಗಡಿ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. "ತೊಲಗಲಿ ತೊಲಗಲಿ ಮದ್ಯದಂಗಡಿ ತೊಲಗಲಿ, ಉಳಿಯಲಿ ಉಳಿಯಲಿ ನಮ್ಮ ಗ್ರಾಮ ಉಳಿಯಲಿ" ಅಂತಾ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮದ್ಯದಂಗಡಿ ಮುಚ್ಚುವವರೆಗೂ ಹೋರಾಟ ನಿಲ್ಲದು ಅಂತಾ ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲದೇ ವೈನ್ ಶಾಪ್ ವಿರುದ್ಧ ದೈವದ ಮೊರೆ ಹೋಗಲು ಗ್ರಾಮಸ್ಥರು ನಿರ್ಧರಿಸಿದ್ದಾರೆ‌‌. 

ಪ್ರತಿಭಟನಾ ಸಭೆ

ಮದ್ಯ ಮುಕ್ತ ಗ್ರಾಮ ಹೋರಾಟ ಸಮಿತಿ ಕೊಲ್ಲಮೊಗ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ, ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸುಳ್ಯ ತಾಲೂಕು, ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಅಕ್ರಮ ಮದ್ಯದಂಗಡಿ ತೆರೆದಿರುವ ಬಗ್ಗೆ ಪ್ರತಿಭಟನಾ ಸಭೆಯು ಮಯೂರ ಕಲಾ ಮಂದಿರದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷ ಮಹೇಶ್ ರೈ ಮೇನಾಲ ಮಾತನಾಡಿ, ಮದ್ಯದಂಗಡಿಗೆ ಸಂಬಂಧಪಟ್ಟವರು ನಮ್ಮ ಭಾವನೆಗಳನ್ನು ಒಡೆದು, ನಮ್ಮಲ್ಲಿ ಬಿರುಕು ಉಂಟು ಮಾಡುವಂತೆ ಮಾಡಿ ಹೋರಾಟಕ್ಕೆ ಇಳಿಯದಂತೆ ಮಾಡಬಹುದು. ಅದಕ್ಕೆ ನಾವ್ಯಾರು ಕಿವಿಗೊಡಬಾರದು. ಇಂದು ಮತ್ತು ಈ ಹಿಂದೆ ಹೋರಾಟದಲ್ಲಿ ಭಾಗವಹಿಸಿದವರೆಲ್ಲರೂ ಒಟ್ಟಾಗಿ ನಿಂತು ಹೋರಾಟದ ನೇತೃತ್ವ ಪಡೆದುಕೊಂಡವರನ್ನು ಬಿಡದೆ ಮುಂದೆಯೂ ಪಾಲ್ಗೊಳ್ಳಬೇಕು ಎಂದರಲ್ಲದೇ ಅಜ್ಜಾವರದಲ್ಲಿ ಓಪನ್ ಆದ ಮದ್ಯದಂಗಡಿ ಬಂದ್ ಮಾಡುವ ಬಗ್ಗೆ ನಡೆಯುತ್ತಿರುವ ಹೋರಾಟದ ಬಗ್ಗೆಯೂ ವಿವರಿಸಿದರು. ಹೋರಾಟದ ಸಂದರ್ಭ ಅನೇಕ ಟೀಕೆಗಳನ್ನು ಎದುರಿಸಿಕೊಂಡು ನಾವು ಯಶಸ್ವಿಯಾಗಬೇಕು. ಅಬಕಾರಿಯವರು ಗ್ರಾಮ ಪಂಚಾಯತ್ ಗೆ ತಿಳಿಸದೆ ಓಪನ್ ಆದ ಮದ್ಯದಂಗಡಿಯನ್ನು ಅವರಿಗೆ ತಿಳಿಯದಂತೆ ಬಂದ್ ಮಾಡಿಸುತ್ತೇವೆ ಎಂದರು. 

ವೇದಿಕೆಯಲ್ಲಿದ್ದ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಹಿಮ್ಮತ್ ಕೆ.ಸಿ. ಮಾತನಾಡಿ ಗ್ರಾಮಗಳಲ್ಲಿ ಮದ್ಯದಂಗಡಿ ತೆರೆಯಬೇಕಾದರೆ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆಯುವಂತೆ ಸರಕಾರಕ್ಕೆ ಬೇಡಿಕೆ ಸಲ್ಲಿಸುವ ಕಾರ್ಯ ನಡೆಯಬೇಕು. ಇಲ್ಲದಿದ್ದರೆ ಗ್ರಾಮದ ಆರೋಗ್ಯ, ನೆಮ್ಮದಿ ಎಲ್ಲವೂ ಹಾಳಾಗುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಹೋರಾಟ ಸಮಿತಿ ಅಧ್ಯಕ್ಷ ಮಾಧವ ಚಾಂತಾಳ ವಹಿಸಿದ್ದರು. ಪ್ರಸ್ತಾವಿಕವಾಗಿ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಪಿ. ಗಿರಿಧರ ಮಾತನಾಡಿದರು.

ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ, ಅನೇಕರನ್ನು ಮದ್ಯಮುಕ್ತರನ್ನಾಗಿಸಿ ಊರನ್ನು ಸುಭೀಕ್ಷೆ ಮಾಡಬೇಕೆಂದು ಹೊರಟಿದ್ದರು. ಅದರಂತೆ ಇಲ್ಲಿಯೂ 2 ಸಲ ಮದ್ಯವರ್ಜನ ಶಿಬಿರಗಳಾಗಿದೆ. ಈ ಮೂಲಕ ಅನೇಕ ಕುಟುಂಬಗಳು ಹೊಸ ಜೀವನ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಇಲ್ಲಿ ಮದ್ಯದಂಗಡಿ ತೆರೆದ ಕಾರಣ ಮತ್ತೆ ಅನೇಕ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುಂತಾಗಬಹುದೆಂಬ ಆತಂಕ ಎಲ್ಲರಲ್ಲೂ ಇದೆ. ಊರವರ ವಿರೋಧ ಕಟ್ಟಿಕೊಂಡು ಮದ್ಯದಂಗಡಿ ತೆರೆದಿರುವುದು ಸರಿಯಲ್ಲ ಎಂಬುದನ್ನು ಅವರು ಯೋಚನೆ ಮಾಡಬೇಕಿತ್ತು. ನೀವಾಗಿಯೇ ತೆರೆದ ಮದ್ಯದಂಗಡಿಯನ್ನು ಪರ್ಮನೆಂಟ್ ಗಿ ನೀವಾಗಿಯೇ ಮುಚ್ಚಿಸಿದರೆ ನಿಮಗೆ ಊರವರ ಮತ್ತು ಎಲ್ಲರ ಗೌರವ ಹೆಚ್ಚಾಗುತ್ತದೆ. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಆಗದಿದ್ದರೆ ಈ ಭಾಗದವರಿಗೆ ತೊಂದರೆ ಎಂದು ಹೇಳಿದರು.

ಸಭೆಯ ಬಳಿಕ ಮೆರವಣಿಗೆಯಲ್ಲಿ ಸಾಗಿ ಪಂಚಾಯತ್ ನಲ್ಲಿ ಮದ್ಯದಂಗಡಿ ನಿಲ್ಲಿಸುವಂತೆ ಮನವಿ ನೀಡಲಾಯಿತು. ಜೊತೆಗೆ ಕೊಲ್ಲಮೊಗ್ರ ಮುಖ್ಯ ಪೇಟೆಯಲ್ಲಿ ಪ್ರತಿಭಟನಾಕಾರರು ಪ್ರತಿಕೃತಿಯೊಂದನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.‌

ಮದ್ಯ ಮುಕ್ತ ಗ್ರಾಮ

ಕೊಲ್ಲಮಗ್ರು ಗ್ರಾಮ ಕಳೆದ 18 ವರ್ಷಗಳಿಂದ ಮದ್ಯಮುಕ್ತ ಗ್ರಾಮವಾಗಿದೆ ಎಂದು ಗ್ರಾಮದ ಹಿರಿಯರು ತಿಳಿಸಿದ್ದಾರೆ. ಇಂತಹ ಗ್ರಾಮದಲ್ಲಿ ವೈನ್ ಶಾಪ್ ತೆರೆದಿರುವುದು ಸರಿಯಲ್ಲ ಎಂದು ಗ್ರಾಮದ ಮಹಿಳೆಯರು ದೂರಿದ್ದಾರೆ. ಅಲ್ಲದೇ ಪ್ರತಿಭಟನೆಯಲ್ಲೂ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. 

ದೈವದ ಮೊರೆ

ಮದ್ಯಮುಕ್ತ ಗ್ರಾಮವನ್ನಾಗಿಸಲು ಗ್ರಾಮಸ್ಥರು ಸ್ಥಳೀಯ ದೈವಸ್ಥಾನಗಳಲ್ಲಿ ಹರಕೆ ಸಲ್ಲಿಸಿದರು. 

ಮೆರವಣಿಗೆ ವೇಳೆ ವೈನ್ ಶಾಪ್ ಬಂದ್!

ಗ್ರಾಮಸ್ಥರ ಪ್ರತಿಭಟನೆ ವೇಳೆ ಮದ್ಯದಂಗಡಿ ಮುಚ್ಚಲಾಗಿತ್ತು. ಸುಬ್ರಹ್ಮಣ್ಯ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.

ವೀಡಿಯೋ



Ads on article

Advertise in articles 1

advertising articles 2

Advertise under the article