.jpg)
MANGALURU: ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿದ ಏಜೆನ್ಸಿಯಿಂದ ದೋಖಾ!!
ಮಂಗಳೂರು: ಮಂಗಳೂರಿನ ಖಾಸಗಿ ಏಜೆನ್ಸಿಯೊಂದು ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 300ಕ್ಕೂ ಅಧಿಕ ಮಂದಿಗೆ 10 ಕೋಟಿಗೂ ಮಿಕ್ಕಿ ವಂಚಿಸಿದ ಘಟನೆ ನಡೆದಿದೆ. ಸದ್ಯ ಸಂತ್ರಸ್ತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, Hire Glow Elegent overseas international ಪ್ರೈವೇಟ್ ಲಿಮಿಟೆಡ್ ಹೆಸರಿನ ಸಂಸ್ಥೆಯಿಂದ ಕೋಟಿ ಕೋಟಿ ವಂಚನೆಯಾಗಿರುವುದರ ಬಗ್ಗೆ ದೂರನ್ನ ನೀಡಿದ್ದಾರೆ.
ಮಂಗಳೂರಿನ ಕಂಕನಾಡಿಯಲ್ಲಿ ತನ್ನ ಕೇಂದ್ರ ಕಚೇರಿಯನ್ನ ಈ ಖಾಸಗಿ ಸಂಸ್ಥೆ ಹೊಂದಿದ್ದು, ಇಲ್ಲಿ ಯಾರಿಗೆಲ್ಲ ವಿದೇಶದಲ್ಲಿ ಉದ್ಯೋಗ ಬೇಕು ಅವರಿಗೆ ಸಂಸ್ಥೆಯ ಮೂಲಕ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸಂತ್ರಸ್ತರಿಂದ ಹಣ ಪಡೆದು ಬಳಿಕ ಅತ್ತ ವಿದೇಶದಲ್ಲಿ ಉದ್ಯೋಗವೂ ಇಲ್ಲ, ಇತ್ತ ಉದ್ಯೋಗಕ್ಕಾಗಿ ನೀಡಿದ ಹಣವೂ ಇಲ್ಲದೆ ಕಂಗಾಲಾಗಿದ್ದಾರೆ.
ನ್ಯೂಜಿಲ್ಯಾಂಡ್ ನಲ್ಲಿರುವ ರಿಗ್ ಎಂಬಲ್ಲಿನ ವೆಲರಿಸ್ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದುದಾಗಿ Hire Glow Elegent overseas international ಸಂಸ್ಥೆಯವರು ನಂಬಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಮಾರು 185ಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಈ ಖಾಸಗಿ ಸಂಸ್ಥೆಯನ್ನ ಸಂಪರ್ಕ ಮಾಡಿದ್ದರು. ಹಾಗೆಯೇ ಉಡುಪಿ, ಕೇರಳ ಸೇರಿದಂತೆ ಹೊರ ರಾಜ್ಯಗಳಿಂದ ಸುಮಾರು 300ಕ್ಕೂ ಹೆಚ್ಚು ಮಂದಿ ಈ ಸಂಸ್ಥೆಯನ್ನ ನಂಬಿ ಉದ್ಯೋಕ್ಕಾಗಿ ಸಂಪರ್ಕ ಮಾಡಿದ್ದರು. 185ಕ್ಕೂ ಹೆಚ್ಚು ಮಂದಿಯಿಂದ ತಲಾ 1ಲಕ್ಷದ 85 ಸಾವಿರ ಹಣವನ್ನ Hire Glow Elegent overseas international ಪಡೆದಿದ್ದರು. ಹಾಗೆಯೇ ಏಜೆಂಟ್ ಗಳ ಮುಖಾಂತರ ಸುಮಾರು 60 ಮಂದಿಯಿಂದ ತಲಾ 3 ಲಕ್ಷ ಹಣವನ್ನ ಪಡೆದಿದ್ದರು. ಹೀಗೆಯೇ ಸುಮಾರು 300ಕ್ಕೂ ಅಧಿಕ ಮಂದಿಯಿಂದ 10 ಕೋಟಿಗೂ ಮಿಕ್ಕಿ ಹಣ ಪಡೆದಿರುವ ಆರೋಪವನ್ನ ಈ ಸಂಸ್ಥೆ ಎದುರಿಸುತ್ತಿದೆ.
ಇಷ್ಟೇ ಅಲ್ಲದೇ ಈ ಸಂಸ್ಥೆ ತುಂಬಾ ನಾಜೂಕಾಗಿ ಸಂತ್ರಸ್ತರನ್ನ ಯಾಮಾರಿಸಿದೆ. ಹೇಗಂದ್ರೆ ಕಳೆದ ನವೆಂಬರ್ ತಿಂಗಳಲ್ಲಿ ಸಂದರ್ಶನಕ್ಕೆ ಬರುವಂತೆ ಉದ್ಯೋಗಾರ್ತಿಗಳಿಗೆ ಈ ಸಂಸ್ಥೆ ಸೂಚಿಸಿತ್ತು. ನವೆಂಬರ್ ತಿಂಗಳ ಕೊನೇ ವಾರದಲ್ಲಿ ಉದ್ಯೋಗಾರ್ತಿಗಳಿಗೆ ಮೆಡಿಕಲ್ ಫಿಟ್ನೆಸ್ ನ್ನು ಈ ಸಂಸ್ಥೆ ಮಾಡಿಸಿತ್ತು. ಹಾಗೆಯೇ ಜನವರಿ ತಿಂಗಳ ಮೊದಲ ವಾರದಲ್ಲಿ ಕೆಲಸಕ್ಕೆ ಸೇರಲು ಕಾಂಟ್ರ್ಯಾಕ್ಟ್ ಗೆ ಸಹಿ ಹಾಕಿಸಿದ್ದರು. ಇದಾದ ಬಳಿಕ ಮಾರ್ಚ್ ತಿಂಗಳ ಕೊನೇ ವಾರದಲ್ಲಿ ಭಾವಚಿತ್ರ, ವೀಸಾ ಅಪ್ಲಿಕೇಶನ್ ಫಾರ್ಮ್ ಹಾಗೆಯೇ ಬಾಕಿ ಉಳಿದ ಮೊತ್ತವನ್ನು ಕಚೇರಿಯಲ್ಲಿ ನೀಡಲು ಸಂಸ್ಥೆ ಸೂಚಿಸಿತ್ತು. ಅದರಂತೆ ಸಂತ್ರಸ್ತರು ಸಂಸ್ಥೆ ನೀಡಿದ ಈ ಎಲ್ಲಾ ಸೂಚನೆಗಳನ್ನ ಪಾಲಿಸಿದೆ. ಇದರೊಂದಿಗೆ ಎಪ್ರಿಲ್ ಮೊದಲ ವಾರದಲ್ಲಿ ಉದ್ಯೋಗ ಆಕಾಂಕ್ಷಿಗಳು ಟಿಕೆಟ್ ಮೊತ್ತದ ಹಣ ಪಾವತಿಸಬೇಕೆಂದು ಸಂಸ್ಥೆ ತಿಳಿಸಿತ್ತು. ಕೊರಿಯರ್ ಮೂಲಕ ವೀಸಾ ಬರೋದಾಗಿ ಉದ್ಯೋಗ ಆಕಾಂಕ್ಷಿಗಳಿಗೆ ಸಂಸ್ಥೆಯವರು ನಂಬಿಸಿದ್ದರು. ಆದ್ರೆ ಕೊರಿಯರ್ ನಲ್ಲಿ ಬಂದಿದ್ದು ಮಾತ್ರ ತಾವೇ ನೀಡಿದ್ದ ಪಾಸ್ ಪೋರ್ಟ್, ಫೋಟೋ ಹಾಗೂ ಎನ್ವಲಪ್ ಮಾತ್ರ. ಇದನ್ನ ಕಂಡು ಉದ್ಯೋಗಾಂಕ್ಷಿಗಳು ಶಾಕ್ ಆಗಿದ್ದು, ತಾವು ಮೋಸ ಹೋಗಿರುವುದು ಮನವರಿಕೆ ಆಗಿದೆ. ಇದನ್ನ ಮನಗಂಡು ಸಂತ್ರಸ್ಥ ಅಭ್ಯರ್ಥಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಂಸ್ಥೆಯ ಪ್ರಮುಖರಾದ ಮಸೀಉಲ್ಲಾ ಅತೀಉಲ್ಲಾ ಖಾನ್, ಗ್ರೆಟಲ್ ಕ್ವಾಡ್ರಸ್, ಅಶ್ವಿನಿ ಆಚಾರ್ಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಲ್ಲಿ ಮುಂಬೈ ಮೂಲದ ಮಸೀಉಲ್ಲಾ ಅತೀಉಲ್ಲಾ ಖಾನ್ ಎಂಬವನನ್ನ ಪೊಲೀಸರು ಬಂಧಿಸಿದ್ದಾರೆ.
ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸರು ಅಮಾನತು!!
ಇನ್ನು ಈ ಸಂಸ್ಥೆಯ ದೋಖಾದ ಬಗ್ಗೆ ಮಂಗಳೂರಿನ ಪೊಲೀಸರಿಗೂ ಬಿಸಿ ಮುಟ್ಟಿದೆ. ಸಂಸ್ಥೆಯಿಂದಾದ ವಂಚನೆ ಬಗ್ಗೆ ತನಿಖೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸರನ್ನ ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಆದೇಶ ಮಾಡಿದ್ದಾರೆ. ಈ ನಕಲಿ ಸಂಸ್ಥೆಯ ಬಗ್ಗೆ ಆಫೀಸ್ ಪ್ರೊಟೆಕ್ಟರ್ ಎಮಿಗ್ರೇಟ್ಸ್ ಪೊಲೀಸರಿಗೆ ಮೊದಲೇ ಎಚ್ಚರಿಸಿದ್ದರು. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಗೂ ಮಾಹಿತಿ ನೀಡಿದ್ದರು. ಹಾಗೆಯೇ ತನಿಖೆ ನಡೆಸುವಂತೆ ಕದ್ರಿ ಪೊಲೀಸ್ ಠಾಣೆ ಪೊಲೀಸರಿಗೆ ಪೊಲೀಸ್ ಕಮಿಷನರ್ ತಿಳಿಸಿದ್ದರು. ಆದ್ರೆ ತನಿಖೆಯಲ್ಲಿ ಕದ್ರಿ ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿರುವ ಆರೋಪ ಎದುರಾಗಿದೆ. ಹಾಗಾಗಿ ನಕಲಿ ಸಂಸ್ಥೆಯಿಂದ ಹಣ ಪಡೆದು ಸಂತ್ರಸ್ತರಿಗೆ ವಂಚಿಸಲು ಅವಕಾಶ ಮಾಡಿಕೊಟ್ಟಿರುವ ಆರೋಪವಿರುವ ಕಾರಣ ಕದ್ರಿ ಠಾಣೆ ಇನ್ಸ್ ಪೆಕ್ಟರ್ ಸೋಮಶೇಖರ್ ಹಾಗೂ ಆ ಸಂದರ್ಭ ಪಿಎಸ್ ಐ ಆಗಿದ್ದ ಉಮೇಶ್ ಅವರನ್ನ ಅಮಾನತು ಮಾಡಲಾಗಿದೆ. ಇನ್ನುಳಿದಂತೆ ಈ ಇಬ್ಬರು ಪೊಲೀಸರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ ಮಾಡಿದ್ದಾರೆ.