
BELTHANGADY: ತೆಕ್ಕಾರಿನ ಶಾಂತಿ, ಸೌಹಾರ್ದತೆಗೆ ಧಕ್ಕೆ: ದೇವಸ್ಥಾನದ ಆಡಳಿತ ಮಂಡಳಿಗೆ ಪತ್ರ ಬರೆದ ಮುಸ್ಲಿಂ ಒಕ್ಕೂಟ
ಬೆಳ್ತಂಗಡಿ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜಾ ಬಹಿರಂಗವಾಗಿ ತೆಕ್ಕಾರಿನ ಮುಸ್ಲಿಮರ ಬಗ್ಗೆ ಅವಹೇಳನಕಾರಿ, ಮಾನಹಾನಿಕಾರವಾದ ಪದಗಳನ್ನು ಬಳಸಿ ಕೋಮುಪ್ರಚೋದನಾಕಾರಿ ಭಾಷಣಕ್ಕೆ ಅವಕಾಶ ಮಾಡಿಕೊಟ್ಟಿರುವುದರ ವಿರುದ್ದ ಗ್ರಾಮದ ಮುಸ್ಲಿಮರು ದೇವಸ್ಥಾನದ ಆಡಳಿತ ಮಂಡಳಿಗೆ ತಮ್ಮ ನಿಲುವನ್ನು ವ್ಯಕ್ತಪಡಿಸಲು ಪತ್ರವನ್ನು ಬರೆದಿದ್ದಾರೆ.
ಮೇ 03 ರಂದು ರಾತ್ರಿ 9.30ಕ್ಕೆ ಸರಿಯಾಗಿ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ವೇದಿಕೆಯಲ್ಲಿ ಊರಿನ ಮುಸ್ಲಿಮರಿಗೆ ಕೆಟ್ಟದಾದ ಪದಗಳನ್ನು ಬಳಸಿ ಅವ್ಯಾಚ ಶಬ್ದಗಳಿಂದ ನಿಂದಿನೆ ಮಾಡುವ ಭಾಷಣ ಮಾಡಿದ್ದು, ಮುಸ್ಲಿಂ ಸಮುದಾಯಕ್ಕೆ ನೋವುಂಟಾಗಿದ್ದು, ಈ ಕಾರ್ಯಕ್ರಮಕ್ಕೆ ತಾವಾಗಿಯೇ ಗ್ರಾಮದ ಎಲ್ಲಾ ಮಸೀದಿಗಳಿಗೆ ಬಂದು ಕಾರ್ಯಕ್ರಮಕ್ಕೆ ಬರಬೇಕೆಂದು ಆಮಂತ್ರಣ ನೀಡಿದ್ದೀರಿ, ಅದೇ ರೀತಿ ತಾವು ನೀಡಿದ ಆಮಂತ್ರಣ ಸ್ವೀಕರಿಸಿ ತೆಕ್ಕಾರಿನಲ್ಲಿ ಶತಮಾನಗಳಿಂದಲೂ ಸೌಹಾರ್ದತೆಯಿಂದ ಇದ್ದು ಸೌಹಾರ್ಧತೆಯನ್ನು ಇನ್ನಷ್ಟು ಉತ್ತೇಜಿಸುವ ದೃಷ್ಟಿಯಿಂದ ತಮ್ಮ ಕಾರ್ಯಕ್ರಮಕ್ಕೆ ಗ್ರಾಮದ ಮುಸ್ಲಿಂ ಬಾಂಧವರು ಭಾಗವಹಿಸಿರುತ್ತೇವೆ. ಆದರೆ ಅದೇ ವೇದಿಕೆಯಲ್ಲಿ ಗ್ರಾಮದ ಮುಸ್ಲಿಮರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದು ಮುಸ್ಲಿಂ ಸಮುದಾಯಕ್ಕೆ ನೋವುಂಟಾಗಿದೆ.
ಊರಿನ ಹಿಂದೂ - ಮುಸ್ಲಿಂ ಅಣ್ಣತಮ್ಮಂದಿರಂತೆ ಬಾಳಬೇಕಾಗಿದ್ದ ನಮ್ಮ ಸಾಮರಸ್ಯವನ್ನು ಸೌಹಾರ್ದತೆಯನ್ನು ಹಾಳು ಮಾಡಿದ್ದೀರಿ ಅಲ್ಲದೆ ಬ್ರಹ್ಮಕಲಶೋತ್ಸವದ ಸಂದರ್ಭ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ವಾಹನ ಪಾರ್ಕಿಂಗ್, ಸಭಾ ವೇದಿಕೆಗೆ, ನೀರಿನ ವ್ಯವಸ್ಥೆಗೆ, ಅನ್ನದಾನದ ವ್ಯವಸ್ಥೆಗೆ ಮುಸ್ಲಿಮರು ತಮ್ಮ ಜಮೀನಿನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ತಾವು ಟ್ಯೂಬ್ ಲೈಟ್ ಹಾಗೂ ಡೀಸೆಲ್ ಕದ್ದ ಬಗ್ಗೆ ಸ್ಪಷ್ಟವಾದ ಸಾಕ್ಷಿ ಇಲ್ಲದೆ ನಮ್ಮ ಸಮುದಾಯದ ಮೇಲೆ ಗಂಭೀರ ಆರೋಪ ಹೊರಿಸಿದ್ದು ಈ ಬಗ್ಗೆ ಶ್ರೀ ಗೋಪಾಲಕೃಷ್ಣ ಆಡಳಿತ ಮಂಡಳಿಯು ತಮ್ಮ ನಿಲುವನ್ನು ಸ್ಪಷ್ಠಪಡಿಸುವಂತೆ ಗ್ರಾಮದ ಮುಸ್ಲಿಂ ಒಕ್ಕೂಟ ಪತ್ರದ ಮೂಲಕ ಒತ್ತಾಯಿಸಿದೆ.