ಜಮೀರ್ ಅಹ್ಮದ್ 'ಲ್ಯಾಂಡ್ ಜಿಹಾದ್'ಗೆ ಕಾಂಗ್ರೆಸ್ ಕುಮ್ಮಕ್ಕು: ಕಿಶೋರ್ ಕುಮಾರ್
Wednesday, November 6, 2024
ಪುತ್ತೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಪ್ರಕರಣದಲ್ಲಿ ಖುದ್ದು ಸರಕಾರವೇ ಮುತುವರ್ಜಿ ವಹಿಸಿ ರೈತರಿಂದ ಭೂಮಿ ಕಬಳಿಸಲು ಕುಮ್ಮಕ್ಕು ನೀಡುತ್ತಿದೆ. ಹಿಂದೂಗಳ ಆಸ್ತಿಯನ್ನ ಕಬಳಿಸುವ ಕೆಲಸವನ್ನ ಸಚಿವ ಜಮೀರ್ ಅಹ್ಮದ್ ಮೂಲಕ 'ಲ್ಯಾಂಡ್ ಜಿಹಾದಿ'ಗೆ ಬೆಂಬಲ ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಿಟ್ಟಿ ಭಾಗ್ಯಗಳನ್ನ ದ.ಕ -ಉಡುಪಿ ಜಿಲ್ಲೆಯವರು ತಿರಸ್ಕರಿಸಿದ್ದಾರೆ. ಆದ್ರೆ ಉಳಿದ ಜಿಲ್ಲೆಯವರು ಬಿಟ್ಟಿ ಭಾಗ್ಯಗಳಿಗೆ ಸೋತು ಕಾಂಗ್ರೆಸ್ಗೆ ಮತ ಹಾಕಿದ ಪರಿಣಾಮ ಚಡಪಡಿಸುವ ಪರಿಸ್ಥಿತಿ ಬಂದಿದೆ. ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ಗಾಗಿ ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ.
ಆರ್ಟಿಸಿಯಲ್ಲಿ 'ವಕ್ಫ್ ಆಸ್ತಿ' ಎಂದು ರೈತರ ಭೂಮಿಯಲ್ಲಿ ದಾಖಲಿಸುವುದು ಸರಿಯಲ್ಲ. ಮಠ, ಮಂದಿರಗಳ ಆಸ್ತಿಯಲ್ಲೂ ಕೂಡ ಇಂತಹದ್ದೇ ದಾಖಲಿಸಲಾಗಿದೆ. ಇದು ಇಡೀ ಹಿಂದೂ ಸಮಾಜದ ಮೇಲೆ ಮಾಡಿದ ಅನ್ಯಾಯ. ರೈತರ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳ ಒಂದಿಂಚೂ ಜಾಗವನ್ನ ಕೂಡ ವಕ್ಫ್ಗೆ ಬಿಟ್ಟು ಕೊಡುವುದಿಲ್ಲ. ಅದಕ್ಕಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ, ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಗುಡುಗಿದರು.