
PUTTUR: ಪುತ್ತೂರು ಅಂಬಿಕಾ ಪದವಿಪೂರ್ವ ಕಾಲೇಜಿನ ಎಡವಟ್ಟು!?
ಪುತ್ತೂರು: ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಭಾಗಿಯಾಗಲು ತೆರಳಿದ್ದ ವಿದ್ಯಾರ್ಥಿಗೆ ಅನ್ಯಾಯ ಮಾಡಲಾಗಿದೆ ಎಂದು ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ವಿರುದ್ಧ ಮರಾಠಿ ಸಂರಕ್ಷಣಾ ಸಮಿತಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿನ ಅಂಬಿಕಾ ಪದವಿಪೂರ್ವ ಕಾಲೇಜ್ ಆಡಳಿತ ವಿರುದ್ದ ಪ್ರತಿಭಟನೆ ನಡೆಸಲು ನಿರ್ಧಾರಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮರಾಠಿ ಸಂರಕ್ಷಣಾ ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ್, ಪುತ್ತೂರಿನ ಅಂಬಿಕಾ ಪದವಿಪೂರ್ವ ಕಾಲೇಜಿನಿಂದ ವಿದ್ಯಾರ್ಥಿಗೆ ಅನ್ಯಾಯವಾಗಿದೆ. ಕಾಲೇಜಿನವರು ಈ ಎಡವಟ್ಟು ಮಾಡಿದ್ದಾರೆ. ಮಧ್ಯ ಪ್ರದೇಶದಲ್ಲಿ ಅಖಿಲ ಭಾರತೀಯ ವಿದ್ಯಾಭಾರತಿ ಪ್ರಾಂತೀಯ ಕ್ರೀಡಾಕೂಟದಲ್ಲಿ ಭಾಗಿಯಾಗಬೇಕಿದ್ದ ವಿದ್ಯಾರ್ಥಿಯನ್ನು ಕ್ರೀಡೆಯಲ್ಲಿ ಭಾಗಿಯಾಗಲು ಮಧ್ಯಪ್ರದೇಶಕ್ಕೆ ಕಾಲೇಜು ಆಡಳಿತ ಮಂಡಳಿ ಕಳುಹಿಸಿತ್ತು. ಆದರೆ ಕ್ರೀಡಾಕೂಟದಲ್ಲಿ ಭಾಗಿಯಾಗಲು ಬೇಕಾದ ನೊಂದಣಿಯನ್ನೇ ಅಂಬಿಕಾ ಕಾಲೇಜು ಮಾಡಿರಲಿಲ್ಲ. ಮಧ್ಯಪ್ರದೇಶದ ಸತ್ನಾ ಕ್ರೀಡಾಂಗಣಕ್ಕೆ ತಲುಪಿದಾಗ ಈ ನೊಂದಣಿ ಮಾಡದ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾಲೇಜು ಸಿಬ್ಬಂದಿಗಳ ಬಳಿ ಕೇಳಿದಾಗ ಹಾರಿಕೆಯ ಮತ್ತು ಬೇಜಾಬ್ದಾರಿಯ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಅಶೋಕ್ ನಾಯ್ಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈಶ್ವರ ನಾಯ್ಕ್, ಅಣ್ಣು ನಾಯ್ಕ್, ನಾರಾಯಣ ನಾಯ್ಕ್, ಶಿವಪ್ಪ ನಾಯ್ಕ್ ಉಪಸ್ಥಿತರಿದ್ದರು.