ಮಂಗಳೂರು: ಹಿಂದೂ ರಾಷ್ಟ್ರ ಜಾಗೃತಿ ಸಭೆಗೆ SDPI ವಿರೋಧ | ದೇಶದ್ರೋಹದ ಕೇಸು ದಾಖಲಿಸುವಂತೆ ಕಮೀಷನರ್ ಗೆ ಮನವಿ
ಮಂಗಳೂರು ನಗರದ ಕದ್ರಿ
ಮೈದಾನದಲ್ಲಿ ಮಾರ್ಚ್ 12 ರಂದು ಈ ಸಭೆ ಆಯೋಜಿಸಲಾಗಿದೆ. ಈ ಕುರಿತ ಫ್ಲೆಕ್ಸ್, ಜಾಹೀರಾತುಗಳು ಪ್ರಕಟಗೊಂಡಿವೆ.
ಈ ಕುರಿತು ಇಂದು
ಎಸ್ಡಿಪಿಐ ನಿಯೋಗವು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಸಭೆಯ ವಿರುದ್ದ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಹಿಂದೂ ಜನಜಾಗೃತಿ ಸಮಿತಿಯ ಹೆಸರಿನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಎಂಬ ದೇಶ ವಿರೋಧಿ ಕಾರ್ಯಕ್ರಮ ನಡೆಸಲು ವ್ಯಾಪಕ ಪ್ರಚಾರ ನಡೆಯುತ್ತಿದೆ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಾಹನಗಳ ಮೇಲೆ ಪೋಸ್ಟರ್ ಗಳನ್ನು ಅಂಟಿಸಲಾಗಿದ್ದು, ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವೀಡಿಯೊಗಳು ಹರಿದಾಡುತ್ತಿವೆ. ಇದೊಂದು ಕಾನೂನು ಬಾಹಿರ ಮತ್ತು ದೇಶವಿರೋಧಿ ಸಭೆಯಾಗಿರುತ್ತದೆ. ಭಾರತವು ಪರಿಪೂರ್ಣ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ಎಂಬುದನ್ನು ಸಂವಿಧಾನ ಪ್ರಬಲವಾಗಿ ಪ್ರತಿಪಾದಿಸಿರುತ್ತದೆ.
ಈ ದೇಶವು ಯಾವುದೇ ಧರ್ಮದ
ಆಧಾರದಲ್ಲಿ ಗುರುತಿಸುವ ದೇಶವೆಂದು ಉಲ್ಲೇಖಿಸುವುದು ಕಾನೂನು ಬಾಹಿರ ಮತ್ತು
ದೇಶದ್ರೋಹದ ಕೃತ್ಯವಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಈ
ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ದೇಶದ್ರೋಹಿ ಕಾರ್ಯಕ್ರಮ ನಡೆಸಲು ಯಾವುದೇ ಕಾರಣಕ್ಕೂ
ಅವಕಾಶ ನೀಡಬಾರದು. ಮತ್ತು ಈಗಾಗಲೇ ಜಿಲ್ಲಾದ್ಯಂತ
ಪೋಸ್ಟರ್ ಅಂಟಿಸಿ ಸಮಾಜದಲ್ಲಿ ಆತಂಕದ
ವಾತಾವರಣ ನಿರ್ಮಾಣ ಮಾಡಿದ ಹಿಂದೂ
ಜನಜಾಗೃತಿ ಸಮಿತಿಯ ವಿರುದ್ಧ ದೇಶದ್ರೋಹದ
ಪ್ರಕರಣ ದಾಖಲಿಸಿ ಆ ಸಂಘಟನೆಯನ್ನು
ನಿಷೇಧ ಮಾಡಿ ಅದರ ಮುಖಂಡರನ್ನು
ಬಂಧಿಸಬೇಕು ಎಂದು ನಿಯೋಗವು ಮಂಗಳೂರು
ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರನ್ನು ಒತ್ತಾಯಿಸಿದೆ
ನಿಯೋಗದಲ್ಲಿ SDPI ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲ ಜೋಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ, ಜಿಲ್ಲಾ ಸಮಿತಿಯ ಸದಸ್ಯರಾದ ಅಬೂಬಕ್ಕರ್ ಮದ್ವ, ಉಳ್ಳಾಲ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಉಪಸ್ಥಿತರಿದ್ದರು