
ಕಾಸರಗೋಡು: ಹೆದ್ದಾರಿ ಕಾಮಗಾರಿ ವೇಳೆ ಎಡವಟ್ಟು; ಹೈಟೆನ್ಶನ್ ತಂತಿ ಮೇಲೆ ಉರುಳಿದ ಮಸೀದಿ ಮಿನಾರ!
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಮಸೀದಿ ಕಟ್ಟಡವೊಂದರ ಮಿನಾರ (ಗೋಪುರ) ತೆರವುಗೊಳಿಸುವ ವೇಳೆ ಭಾರೀ ಅನಾಹುತ ಒಂದು ಅದೃಷ್ಟವಶಾತ್ ತಪ್ಪಿದ ಘಟನೆ ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿ ನಡೆದಿದೆ.
ರಸ್ತೆ ಬದಿಯಲ್ಲಿದ್ದ ಮಸೀದಿ ಕಟ್ಟಡವನ್ನು ಮಂಗಳವಾರ ಸಂಜೆ ಆರು ಗಂಟೆ ಸುಮಾರಿಗೆ ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಗುತ್ತಿತ್ತು. ಈ ವೇಳೆ ಮಸೀದಿಯ ಮಿನಾರವನ್ನು ಜೆಸಿಬಿಯಿಂದ ತೆರವುಗೊಳಿಸಲು ಮುಂದಾಗುತ್ತಲೇ ಎತ್ತರದ ಮಿನಾರ ಏಕಾಏಕಿ ಧರಶಾಹಿಯಾಗಿದೆ. ನೇರವಾಗಿ ರಸ್ತೆ ಪಕ್ಕದಲ್ಲೇ ಇದ್ದ ಹೈಟೆನ್ಶನ್ ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದಿವೆ. ಇದರಿಂದ ಅಲ್ಲಿದ್ದ ಕೆಲವು ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿದ್ದು, ವಿದ್ಯುತ್ ತಂತಿಗಳು ಸ್ಪರ್ಶಿಸಿ ಬೆಂಕಿಯ ಕಿಡಿ ಹಾರಿದ್ದು ನೋಡುಗರು ಭಯಭೀತರಾಗಿದ್ದಾರೆ. ಅಲ್ಲೇ ಇದ್ದ ಜನರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದೆ.
ಅದೃಷ್ಟವಶಾತ್ ತಕ್ಷಣವೇ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ಯಾವುದೇ ಹಾನಿಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಬದಿ ಕಾಮಗಾರಿ ನಡೆಸುವ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವೀಡಿಯೋ ವೀಕ್ಷಿಸಿ