ಮಂಗಳೂರು: ಕರಾವಳಿ ಕರ್ನಾಟಕದ ಅತೀ ಎತ್ತರದ ಧ್ವಜ ಸ್ತಂಭ ಲೋಕಾರ್ಪಣೆ; ಕಂಗೊಳಿಸಿದ ತ್ರಿವರ್ಣ ಧ್ವಜ
ಮಂಗಳೂರು: ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಅಂಗಣದಲ್ಲಿ ಕರಾವಳಿ ಕರ್ನಾಟಕದಲ್ಲೇ ಅತೀ ಎತ್ತರದ 164 ಅಡಿ ಧ್ವಜ ಸ್ತಂಭ ನಿರ್ಮಾಣವಾಗಿದ್ದು, ಇದನ್ನ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಅವರು ನೂತನ ಸ್ತಂಭದಲ್ಲಿ ಧ್ವಜಾರೋಹಣಗೈದರು.
ಕಳೆದ ವರುಷ ಉಳ್ಳಾಲ ತಾಲೂಕಿನ ತೊಕ್ಕೊಟ್ಟಿನ ಓವರ್ ಬ್ರಿಡ್ಜ್ ಬಳಿ ಶಾಸಕ ಯು.ಟಿ ಖಾದರ್ ಅವರು ತಮ್ಮ ಅನುದಾನದಲ್ಲಿ 110 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸಿ ರಾಷ್ಟ್ರ ಧ್ವಜಾರೋಹಣಗೈದಿದ್ದರು. ಇದೀಗ ತೊಕ್ಕೊಟ್ಟಿನ 110 ಅಡಿ ಎತ್ತರವನ್ನ ಮೀರಿಸಿ ದೇರಳಕಟ್ಟೆಯಲ್ಲಿ 164 ಅಡಿ ಎತ್ತರದ ಧ್ವಜಸ್ತಂಭದ ಮೂಲಕ ರಾಷ್ಟ್ರಧ್ವಜ ಹಾರಿಸಲಾಯಿತು.
ಇದೇ ಸಂದರ್ಭ ಐಜಿಪಿ ಚಂದ್ರಗುಪ್ತ ಮಾತನಾಡಿ, ದೇಶವನ್ನು ಉದಾತ್ತ ಮೌಲ್ಯಗಳ ಮೂಲಕ ಮೊದಲ ಸ್ಥಾನದಲ್ಲಿರಿಸುವ ಚಿಂತನೆಗಳು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡ ರಾಷ್ಟ್ರ ಧ್ವಜಾರೋಹಣದಂತಹ ಪವಿತ್ರವಾದ ಕಾರ್ಯಗಳ ಮೂಲಕ ನೆರವೇರುತ್ತದೆ. ತ್ಯಾಗ, ಬಲಿದಾನ, ಶೌರ್ಯ, ಆತ್ಮಸ್ಥೈರ್ಯ, ಶಾಂತಿ, ಸೌಹಾರ್ದತೆ, ಸಮನ್ವಯತೆ, ಬಹುಸಂಸ್ಕೃತಿಯ ಆಶಯಗಳು ರಾಷ್ಟ್ರಧ್ವಜದ ಮೂಲಕ ಎಲ್ಲರಲ್ಲೂ ಬೇರೂರುತ್ತದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿ, ಸಂಸ್ಥೆಯು ಪರಿಸರದಲ್ಲಿ 24 ವರ್ಷಗಳಿಂದ ಆಸ್ಪತ್ರೆಯನ್ನು ನಡೆಸಿಕೊಂಡು ಬರುತ್ತಿದೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸಂಸ್ಥೆಯಲ್ಲಿ ಬೃಹತ್ ರಾಷ್ಟ್ರಧ್ವಜದ ಅನಾವರಣ ಆಗಿರುವುದು ಗೌರವ ತಂದಿದೆ. ಪ್ರತಿ ವಿದ್ಯಾರ್ಥಿಗಳು ಸಂಸ್ಥೆ ಒಳ ಬರುವಾಗ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ನೀಡಿ ಪ್ರವೇಶಿಸಬೇಕು. ಗಾತ್ರ, ಎತ್ತರ ಎಷ್ಟೆನ್ನುವುದು ವಿಚಾರ ಮುಖ್ಯವಲ್ಲ, ರಾಷ್ಟ್ರ ಧ್ವಜದ ಮಹತ್ವ ಬಹುಮುಖ್ಯವಾಗಿರುತ್ತದೆ‘‘ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಆಡಳಿತ ಸಹ ಕುಲಾಧಿಪತಿ ಎನ್.ವಿಶಾಲ್ ಹೆಗ್ಡೆ, ಸಹಕುಲಾಧಿಪತಿ ಡಾ| ಎಂ. ಶಾಂತರಾಮ ಶೆಟ್ಟಿ, ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, ಉಪಕುಲಪತಿ ಡಾ| ಎಂ.ಎಸ್ ಮೂಡಿತ್ತಾಯ, ಹಣಕಾಸು ವಿಭಾಗದ ನಿರ್ದೇಶಕ ರಾಜೇಂದ್ರ ಎಂ., ವೈದ್ಯಕೀಯ ಅಧೀಕ್ಷಕಿ ಡಾ| ಸುಮಲತಾ ಆರ್ ಶೆಟ್ಟಿ ಉಪಸ್ಥಿತರಿದ್ದರು.