-->
ಮಂಗಳೂರು: ದೈವಕ್ಕೆ ಸ್ವೀಟ್ ಕಾರ್ನ್ ನೀಡಲು ಮುಂದಾದ ಮಗು; ಮಗು ಮನಸ್ಸಿಗೆ ತಲೆದೂಗಿದ ಕಾಂತೇರಿ ಜುಮಾದಿ!

ಮಂಗಳೂರು: ದೈವಕ್ಕೆ ಸ್ವೀಟ್ ಕಾರ್ನ್ ನೀಡಲು ಮುಂದಾದ ಮಗು; ಮಗು ಮನಸ್ಸಿಗೆ ತಲೆದೂಗಿದ ಕಾಂತೇರಿ ಜುಮಾದಿ!

ಮಂಗಳೂರು: ತಡರಾತ್ರಿ ನಡೆಯುತ್ತಿದ್ದ ಭೂತ ಕೋಲವೊಂದರ ವೇಳೆ ಮಗುವೊಂದು ತನ್ನ ಮುಂದೆ ಮಂಡಿಯೂರಿ ಕೂತ ದೈವಕ್ಕೆ ಸ್ವೀಟ್ ಕಾರ್ನ್ ನೀಡಲು ಮುಂದಾಗಿದ್ದು, ಅಪಾರ ಭಕ್ತರ ಜೊತೆಗೆ ದೈವದ ಮೆಚ್ಚುಗೆಗೂ ಪಾತ್ರವಾಗಿದೆ. ಅಲ್ಲದೇ, ದೈವವೂ ಮಗುವನ್ನು ಆಶೀರ್ವದಿಸಿದ ಪ್ರಸಂಗವೂ ನಗರದ ಬಿಕರ್ನಕಟ್ಟೆಯ ಬಜೋಡಿಯಲ್ಲಿ ನಡೆಯಿತು.

ರಾತ್ರಿ‌ 11 ರ ಸುಮಾರಿಗೆ ಕಾಂತೇರಿ ಜುಮಾದಿ ದೈವದ ನೇಮದ ನರ್ತನ ಸೇವೆ ನಡೆಯುತ್ತಿತ್ತು. ನೇಮದಲ್ಲಿ ದೈವವು ಬೇಟೆಯ ಪರಿಕಲ್ಪನೆಯನ್ನು ನರ್ತನದ ಮೂಲಕ ಬಿಂಬಿಸುತ್ತಿತ್ತು. ಈ ವೇಳೆ ಅಲ್ಲಿಯೇ ನೆಲದಲ್ಲಿ ಕುಳಿತು ಮಗುವೊಂದು ಸ್ವೀಟ್ ಕಾರ್ನ್ ತಿನ್ನುತ್ತಾ ನೇಮ ವೀಕ್ಷಿಸುತ್ತಿತ್ತು. ನೇರ ಅಲ್ಲಿಗೆ ಬಂದ ಕಾಂತೇರಿ ಜುಮಾದಿ ದೈವ ತನಗೂ ತಿನಿಸು ಕೊಡುವಂತೆ ಕೈ ಚಾಚಿದೆ.

ಆದರೆ ಕೊಂಚವೂ ವಿಚಲಿತವಾಗದ ಮಗು ಒಂದು ಸಲ ದೈವವನ್ನು ನೋಡಿ ಮುಗ್ಧತೆಯಿಂದ ಚಮಚದಲ್ಲಿ ಸ್ವೀಟ್ ಕಾರ್ನ್ ನೀಡಲೆತ್ನಿಸಿದೆ. ಆದರೆ ಅದು ಕೆಳಗಡೆ ಬಿದ್ದಿದೆ. ಈ ವೇಳೆ ಕಾಂತೇರಿ ಜುಮಾದಿ ದೈವ ನೇಮ ವೀಕ್ಷಣೆ ಮಾಡುವ ಭಕ್ತರತ್ತ ನೋಡಿ 'ತನಗೆ ಹಸಿವಾಗಿದೆ, ಮಗು ಏನೋ ಕೊಡುತ್ತಿದೆ' ಎಂದು ನಟಿಸಿ ತೋರಿಸಿ, ಮತ್ತೆ ಮಗುವಿನತ್ತ ಕೈಯೊಡ್ಡಿದೆ. ಆಗಲೂ ಸ್ವೀಟ್ ಕಾರ್ನ್ ನೀಡಲು ಹೋದ ಮಗುವಿನ ಮುಗ್ಧ ಮನಸ್ಸಿಗೆ ಮನಸೋತ ದೈವ ತನ್ನ ಹಣೆಯಲ್ಲಿದ್ದ  ಬಣ್ಣವನ್ನೇ ಬೆರಳಿನಿಂದ ತೆಗೆದು ಮಗುವಿನ ಹಣೆಗೆ ಆಶೀರ್ವಾದ ಪೂರ್ವಕವಾಗಿ ತಿಲಕವಿರಿಸಿದೆ.

ಈ ಸಂಪೂರ್ಣ ದೃಶ್ಯವು ಅಲ್ಲಿಯೇ ಇದ್ದವರೊಬ್ಬರ ಮೊಬೈಲ್ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ದೈವ ಹಾಗೂ ಮಗುವಿನ ನಡುವೆ ನಡೆದ ಕೇವಲ 25 ಸೆಕೆಂಡುಗಳ ದೃಶ್ಯ ಎಲ್ಲಾ ಕರಾವಳಿಗರ ಹೃದಯವನ್ನೇ ಗೆದ್ದಿದೆ. 

ಎರಡೂವರೆ ವರ್ಷದ ಈ ಮಗುವಿನ‌ ಹೆಸರು ಶಮಿತ್. ಪ್ರಶಾಂತಿ ನಗರದ ದೀಪಕ್ ಹಾಗೂ ದೀಪ್ತಿ ದಂಪತಿಯ ಪುತ್ರ.

ವೀಡಿಯೋ ವೀಕ್ಷಿಸಿ



Ads on article

Advertise in articles 1

advertising articles 2

Advertise under the article