BANTWALA: ಕೊರಗಜ್ಜನ ಕಾರಣಿಕಕ್ಕೆ ಉಕ್ರೇನ್ ಕುಟುಂಬ ಶಾಕ್...!!!
ಬಂಟ್ವಾಳ: ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ಸಕ್ಸಸ್ ಕಂಡ ಬೆನ್ನಲ್ಲೇ ಉಕ್ರೇನ್ ಕುಟುಂಬವೊಂದು ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ. ಮಗುವಿನ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಉಕ್ರೇನ್ ಪ್ರಜೆ ಆಂಡ್ರೋ ಕೊರಗಜ್ಜನಿಗೆ ಹರಕೆ ಹೇಳಿದ್ರು. ಅದರಂತೆ ಮಗುವಿನ ಆರೋಗ್ಯದಲ್ಲಿ ಗುಣಮುಖ ಹೊಂದಿದ್ದು, ಇದೀಗ ಕೊರಗಜ್ಜನಿಗೆ ಹೇಳಿದ್ದ ಹರಕೆಯನ್ನ ಶುಕ್ರವಾರ ತೀರಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ಉಕ್ರೇನ್ ಪ್ರಜೆಗಳಾದ ಆಂಡ್ರೋ, ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಉಡುಪಿಯ ಮಲ್ಪೆ ಕಡಲ ತೀರಕ್ಕೆ ಬಂದಿದ್ದರು. ಈ ಸಂದರ್ಭ ಉಡುಪಿಯ ಗೋಶಾಲೆಗೆ ತೆರಳಿದ್ದ ಈ ಕುಟುಂಬ, ನಾಡಿ ನೋಡಿ ಔಷಧಿ ಕೊಡುವ ಭಕ್ತಿ ಭೂಷಣ್ ಪ್ರಭೂಜಿ ಅವರನ್ನು ಭೇಟಿ ಮಾಡಿದ್ರು. ಅನಾರೋಗ್ಯಕ್ಕೆ ಒಳಗಾಗಿದ್ದ ಮಗನ ವಿಚಾರವನ್ನು ಉಕ್ರೇನ್ ದಂಪತಿ ಗುರೂಜಿ ಅವರಲ್ಲಿ ತಿಳಿಸಿದ್ರು. ಈ ವೇಳೆ ದೇಸಿ ದನದ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ಆರಂಭಿಸಿದ್ದರು. ಹಾಗಾಗಿ ಕಳೆದ ಮೂರು ತಿಂಗಳಿನಿಂದ ಕುಮ್ಡೇಲುವಿನ ಶ್ರೀರಾಧಸುರಭಿ ಗೋಮಂದಿರದಲ್ಲಿ ಉಕ್ರೇನ್ ಕುಟುಂಬ ವಾಸ್ತವ್ಯ ಹೂಡಿದ್ರು. ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಕುಮ್ಡೇಲುವಿನ ಗೋಮಂದಿರದಲ್ಲಿ ನಡೆದ ಕೊರಗಜ್ಜನ ಕೋಲದಲ್ಲಿ ಈ ದಂಪತಿ ತಮ್ಮ ಮಗನ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಪ್ರಾರ್ಥಿಸಿ, ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು. ಅದರಂತೆ ಇದೀಗ ಉಕ್ರೇನ್ ದಂಪತಿಯ ಮಗ ಮ್ಯಾಕ್ಸಿಂ ಗುಣಮುಖನಾಗಿದ್ದಾನೆ.
ಹಾಗಾಗಿ ಉಕ್ರೇನ್ ಕುಟುಂಬ ಶುಕ್ರವಾರ ಭಕ್ತಿಭೂಷಣ್ ದಾಸ್ ಗುರೂಜಿ, ಪದ್ಮನಾಭ ಗೋವಿನ ತೋಟ, ರಾಮಚಂದ್ರ ಮಾರಿಪಳ್ಳ, ಯಾದವ ಕೊಡಂಗೆ, ನವೀನ್ ಮಾರ್ಲ ಉಪಸ್ಥಿತಿಯಲ್ಲಿ ಬಂಟ್ವಾಳದ ಪುದು ಗ್ರಾಮದ ಕೊಡ್ಮಣ್ಣಿನಲ್ಲಿ ಕೊರಗಜ್ಜನಿಗೆ ಅಗೇಲು ಸೇವೆ ನೀಡಿ ಹರಕೆ ತೀರಿಸಿದ್ದಾರೆ. ಇದೀಗ ತಮ್ಮ ಮಗನ ಆರೋಗ್ಯಕರವಾಗಿದ್ದು, ಕೆಲ ದಿನಗಳಲ್ಲಿ ಉಕ್ರೇನ್ ಗೆ ಪ್ರಯಾಣಿಸಲು ಸಜ್ಜಾಗಿದ್ದಾರೆ.
