
ಹರೀಶ್ ಪೂಂಜಾ ಕಾರು ಅಡ್ಡಗಟ್ಟಿದ ಪ್ರಕರಣ; ಬಂಟ್ವಾಳದಲ್ಲಿ ಶುರುವಾಯ್ತು ಸಿಐಡಿ ತನಿಖೆ!
Thursday, October 20, 2022
ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕಾರನ್ನು ಅಡ್ಡಗಟ್ಟಿ ಬೆದರಿಕೆಯೊಡ್ಡಿದ ಪ್ರಕರಣ ಸಂಬಂಧ ಸಿಐಡಿ ತನಿಖೆ ಆರಂಭವಾಗಿದೆ. ಗುರುವಾರ ಬಂಟ್ವಾಳ ಗ್ರಾಮಾಂತರ ಠಾಣೆಗೆ ಆಗಮಿಸಿರುವ ಸಿಐಡಿ ಪೊಲೀಸ್ ಅಧಿಕಾರಿಗಳು ಕಡತ ಪರಿಶೀಲನೆ ಮೂಲಕ ತನಿಖೆ ಆರಂಭಿಸಿದ್ದಾರೆ.
ಮೂರು ದಿನಗಳ ಹಿಂದಷ್ಟೇ ಸರಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು.
ಇದೀಗ, ಸಿಐಡಿ ಇನ್ಸ್ಪೆಕ್ಟರ್ ಶಿವರಾಜ್ ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ಆಗಮಿಸಿ ಕಡತಗಳ ಪರಿಶೀಲನೆಯ ಮೂಲಕ ತನಿಖೆ ಆರಂಭಿಸಿದ್ದಾರೆ.
ಕಳೆದ ವಾರ ನಡೆದಿದ್ದ ಈ ಘಟನೆಯಲ್ಲಿ ಮಂಗಳೂರಿನ ಫಳ್ನೀರ್ ನಿವಾಸಿ ರಿಯಾಝ್ ಎಂಬಾತನನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
ಕಾರು ಓವರ್ ಟೇಕ್ ಮಾಡುತ್ತಾ ತಲವಾರು ದಾಳಿ ಯತ್ನ ನಡೆದಿತ್ತು ಅಂತಾ ಶಾಸಕರು ಆರೋಪಿಸಿದ್ದರಾದರೂ, ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ್ ಸೋನಾವಣೆ ಈ ವಿಚಾರವನ್ನು ತಳ್ಳಿ ಹಾಕಿದ್ದರು.