Eid Milad | ಈದ್ ಮಿಲಾದ್ ಸಂಭ್ರಮ; ಕಿನ್ನಿಗೋಳಿಯಲ್ಲಿ ಮೀಲಾದ್ ರ್ಯಾಲಿ, ದಫ್ ಪ್ರದರ್ಶನ
Tuesday, August 25, 2026
ಕಿನ್ನಿಗೋಳಿ: ಈದ್ ಮಿಲಾದ್ ಪ್ರಯುಕ್ತ ಶಾಂತಿನಗರ ಖಿಲ್ರಿಯಾ ಜುಮಾ ಮಸೀದಿಯ ನೂರುಲ್ ಹುದಾ ಅಸೋಸಿಯೇಶನ್ ವತಿಯಿಂದ ಕಿನ್ನಿಗೋಳಿ ಪೇಟೆಯಲ್ಲಿ ಈದ್ ಮಿಲಾದ್ ರ್ಯಾಲಿ ನಡೆಯಿತು.
ಈ ಸಂದರ್ಭ ಖಿಲ್ರಿಯಾ ಜುಮಾ ಮಸೀದಿ ಖತೀಬ್ ಉಮರುಲ್ ಫಾರೂಕ್ ಸಖಾಫಿ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರು ಈ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಾಗಿದ್ದಾರೆ. ವಿಶ್ವಕ್ಕೆ ಮಾನವತೆಯ ಸಂದೇಶ ಸಾರಿದವರಾಗಿದ್ದಾರೆ. ಸ್ವಾಮಿ ವಿವೇಕಾನಂದ, ಬ್ರಹ್ಮಶ್ರೀ ನಾರಾಯಣ ಗುರು, ಮೈಕಲ್ ಹೆಚ್. ಹರ್ಟ್ ರಂತಹ ಸಾವಿರಾರು ಮಂದಿ ನೇತಾರರು ಮುಹಮ್ಮದ್ ಅವರ ಕುರಿತು ಆಡಿರುವ ಮೆಚ್ಚುಗೆಯ ಮಾತುಗಳೇ ಅದಕ್ಕೆ ಸಾಕ್ಷಿಯಾಗಿದೆ. ಪ್ರವಾದಿವರ್ಯರ ಜೀವನ ಅನ್ನೋದು ಮಾನವ ಕುಲಕ್ಕೆ ಅನುಕರಣೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಟಿ.ಎ. ಹನೀಫ್, ಉಪಾಧ್ಯಕ್ಷ ನವಾಝ್ ಕಲ್ಕರೆ, ಕಾರ್ಯದರ್ಶಿ ಇಕ್ಬಾಲ್ ಗುತ್ತಕಾಡು, ಜೊತೆ ಕಾರ್ಯದರ್ಶಿ ಆರಿಫ್ ಗುತ್ತಕಾಡು, ಖಜಾಂಚಿ ನಾಸೀರ್, ಲೆಕ್ಕ ಪರಿಶೋಧಕ ಜೆ.ಹೆಚ್. ಜಲೀಲ್, ಸಾಮಾಜಿಕ ಕಾರ್ಯಕರ್ತ ಟಿ.ಕೆ. ಅಬ್ದುಲ್ ಖಾದರ್, ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಟಿ.ಹೆಚ್. ಮಯ್ಯದ್ದಿ, ಸಮಾಜ ಸೇವಕ ಸ್ಟ್ಯಾನ್ಲಿ ಪಿಂಟೋ ಕಿನ್ನಿಗೋಳಿ, ನೂರುಲ್ ಹುದಾ ಅಸೋಸಿಯೇಶನ್ ಅಧ್ಯಕ್ಷ ನೂರುದ್ದೀನ್, ಕಾರ್ಯದರ್ಶಿ ಮುಬೀನ್ ಮತ್ತಿತ್ತರರು ಉಪಸ್ಥಿತರಿದ್ದರು.
ಮದ್ರಸ ವಿದ್ಯಾರ್ಥಿಗಳಿಂದ ಶಿಸ್ತುಬದ್ಧ ಮೆರವಣಿಗೆ, ದಫ್ ಪ್ರದರ್ಶನ ನಡೆಯಿತು. ಕಿನ್ನಿಗೋಳಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸಿಹಿತಿಂಡಿ, ತಂಪು ಪಾನೀಯ ವಿತರಿಸಿ ಭಾವೈಕ್ಯತೆ ಮೆರೆದರು. ಕಿನ್ನಿಗೋಳಿ ಬಸ್ಸು ಚಾಲಕ-ಮಾಲಕರ ಸಂಘವು ಬಸ್ ನಿಲ್ದಾಣದ ಬಳಿ ಕಾರ್ಯಕ್ರಮ ನಡೆಸಲು ಬೇಕಾದ ಸಹಕಾರ ನೀಡಿತು.