ಬೆಳ್ತಂಗಡಿ: ಸೇತುವೆ ಕೆಳಭಾಗದಲ್ಲಿ ಗೋವಿನ ರುಂಡ-ಮುಂಡ; ಬಜರಂಗದಳ ಆಕ್ರೋಶ!
Wednesday, December 18, 2024
ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನಾರು ಸೇತುವೆ ಬಳಿ ಅಕ್ರಮ ಗೋ ಮಾಂಸ ಮಾಡಿ ತ್ಯಾಜ್ಯವನ್ನು ಗೋಣಿ ಚೀಲದಲ್ಲಿ ತುಂಬಿಸಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ದನದ ತಲೆ ಸೇರಿದಂತೆ ಚರ್ಮ ಹಾಗೂ ಇತರ ಅವಶೇಷಗಳು ಸುಮಾರು ಹನ್ನೊಂದು ಗೋಣಿಯಲ್ಲಿ ಪತ್ತೆಯಾಗಿದೆ. ಈ ಕುರಿತಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಬಜರಂಗದಳ ಆಕ್ರೋಶ!
ಚಾರ್ಮಾಡಿ ಘಟನೆ ಕುರಿತಂತೆ ಬಜರಂಗದಳ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಂಗಳೂರು ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಪ್ರತಿಕ್ರಿಯಿಸಿದ್ದು, ಚಾರ್ಮಾಡಿಯ ನದಿಯ ಹತ್ತಿರ ಕತ್ತರಿಸಿದ ದನದ ತಲೆ ಹಾಗೂ ಮಾಂಸದ ಮುದ್ದೆ ಸಿಕ್ಕಿರುವುದು ನಮ್ಮ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಸವಾಲೆಸೆದಿರುವ ವಿದ್ಯಾಮಾನವಾಗಿದೆ. ರಾಜ್ಯದಲ್ಲಿ ಅಕ್ರಮ ಗೋಹತ್ಯೆ ತಡೆಗಾಗಿ ಕಾನೂನು ರಚಿಸಲಾಗಿದ್ದರೂ ಗೋಹತ್ಯೆಯು ಹೇರಳವಾಗಿ ನಡೆಯುತ್ತಿರುವುದು ಕಾನೂನನ್ನು ಹಲ್ಲಿಲ್ಲದ ಹಾವಿನಂತೆ ಈ ವ್ಯವಸ್ಥೆ ನಡೆಸಿಕೊಳ್ಳುತ್ತಿರುವುದಕ್ಕೆ ಒಂದು ಉದಾಹರಣೆಯಂತಿದೆ.
ಅಕ್ರಮ ಮಟ್ಕಾ ಧಂದೆ, ಅಕ್ರಮ ಮಸಾಜ್ ಪಾರ್ಲರ್, ಅಕ್ರಮ ಇಸ್ಪೀಟ್ ದಂಧೆ, ಗೋಹತ್ಯೆ,ಲವ್ ಜಿಹಾದ್,ಮುಂತಾದ ಮಾಫಿಯಾಗಳ ಪರ ರಾಜ್ಯದ ಗೃಹ ಇಲಾಖೆಯು ಸಾಫ್ಟ್ ಕಾರ್ನರ್ ಹೊಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುವಂತಿದೆ. ಇದೊಂದು ಉದಾಹರಣೆಯಷ್ಟೇ ದಿನಬೆಳಗಾದರೆ ವ್ಯಕ್ತಿ ಸಮಾಜಕ್ಕೆ ಮಾರಕವಾಗುವಂತಹ ಇಂತಹ ಅನೇಕ ಘಟನೆಗಳು ಬೆಳಕಿಗೆ ಬರುತ್ತಿರುವುದು ಈ ಸರ್ಕಾರದ ವೈಫಲ್ಯವೇ ಸರಿ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆ ಆದಷ್ಟು ಬೇಗ ಇಂತಹ ಕೃತ್ಯಗಳ ಜಾಡು ಹಿಡಿದು ಅಗತ್ಯ ಕ್ರಮಗಳನ್ನು ಕೈಗೊಂಡು ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂಬುದನ್ನು ಬಜರಂಗದಳ ಆಗ್ರಹಿಸುತ್ತದೆ. ಜಿಲ್ಲಾಡಳಿತ ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಬಜರಂಗದಳದ ನೇರ ಕಾರ್ಯಾಚರಣೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.