Uppinangady | ಪೆರಿಯಡ್ಕದಲ್ಲಿ ಕಳ್ಳತನಕ್ಕೆ ಹೊಂಚು ಹಾಕಿದ್ದ ಖದೀಮನ ಬೆನ್ನಟ್ಟಿದ ಯುವಕರು!
Monday, October 14, 2024
ಪುತ್ತೂರು: ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಎಂಬಲ್ಲಿ ಕಳ್ಳತನದ ಪ್ರಕರಣಗಳು ನಡೆಯುತ್ತಿದ್ದು, ಭಾನುವಾರ ರಾತ್ರಿ ಕಳ್ಳನೊಬ್ಬನ ಚಟುವಟಿಕೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಕೆಲವು ಸಮಯದಿಂದ ಈ ಭಾಗದ ಮನೆಗಳಲ್ಲಿ ಕಳ್ಳತನದ ಪ್ರಕರಣಗಳು ನಡೆದಿದ್ದವು. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಆದರೆ ಕಳ್ಳನ ಪತ್ತೆ ಮಾತ್ರ ನಡೆದಿಲ್ಲ. ಈ ನಡುವೆ ಕಳ್ಳತನಕ್ಕಾಗಿ ರಾತ್ರಿ ಹೊಂಚುಹಾಕುತ್ತಿದ್ದ ವ್ಯಕ್ತಿಯೊಬ್ಬನ ಚಟುವಟಕೆ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು, ಇದರಿಂದ ಇಲ್ಲಿ ಜನತೆ ಆತಂಕಗೊಂಡಿದ್ದಾರೆ.
ಕಡಬ ರಸ್ತೆ ಭಾಗದಲ್ಲಿ ಬರುವ ಪೆರಿಯಡ್ಕದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಪೆರಿಯಡ್ಕ ಸಹಕಾರಿ ಸಂಘದ ಶಾಖಾ ಕಟ್ಟಡದ ಮುಂಭಾಗದಲ್ಲಿ ಈತ ಕಾಣಿಸಿಕೊಂಡಿದ್ದಾನೆ. ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಇದು ದಾಖಲಾಗಿದೆ. ಈ ಸಂದರ್ಭ ಸ್ಥಳೀಯ ಕೆಲ ಯುವಕರು ಈತನ ಚಲನವಲನವನ್ನು ದೂರದಿಂದ ನೋಡಿದ್ದಾರೆ. ಬಳಿಕ ಅವರು ಹತ್ತಿರ ಬರುತ್ತಿದ್ದಂತೆ ಈತ ಪರಾರಿಯಾಗಿದ್ದಾನೆ. ಕಡಬ ರಸ್ತೆಯಲ್ಲಿಯೇ ಓಡಿರುವ ಈತನನ್ನು ಬೆನ್ನಟ್ಟುವ ಕೆಲಸವೂ ಸ್ಥಳೀಯ ಯುವಕರಿಂದಾಗಿದೆ. ಆದರೆ ಈತ ಯುವಕರ ಕೈಗೆ ಸಿಕ್ಕಿಲ್ಲ. ಈ ಘಟನೆ ಕುರಿತು ಉಪ್ಪಿನಂಗಡಿ ಪೊಲೀಸರಿಗೂ ದೂರು ನೀಡಲಾಗಿದೆ. ಆದರೆ ಸಿಸಿ ಕ್ಯಾಮರಾದಲ್ಲಿ ಈತನ ಮುಖದ ಚಿತ್ರಣ ಸ್ಪಷ್ಟವಾಗಿ ಕಂಡುಬರದ ಹಿನ್ನಲೆಯಲ್ಲಿ ಕಳ್ಳನ ಪತ್ತೆಯ ಕಾರ್ಯಕ್ಕೆ ತಡೆಯಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯರ ಪ್ರಕಾರ ಈತ ಬೇರೆ ಊರಿನ ವ್ಯಕ್ತಿ. ಪೂರ್ತಿಯಾಗಿ ರೈನ್ ಕೋಟ್ ಹಾಕಿರುವ ಕಾರಣ ಈತನ ಮುಖ ಸ್ಪಷ್ಟವಾಗಿ ಕಂಡುಬರಲಿಲ್ಲ. ಈತನನ್ನು ಪೆರಿಯಡ್ಕದ ಸಮೀಪದ ಓಡ್ಲ ತನಕ ಯುವಕರು ಬೆನ್ನಟ್ಟಿದ್ದು, ಕಳ್ಳ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.