.jpg)
PUTTUR: ಬೆಂಗಳೂರು ಕಂಬಳಕ್ಕೆ ನಿಮ್ಗೂ ಆಫರ್!?
ಪುತ್ತೂರು: ಕರಾವಳಿಯ ಮನೋರಂಜನಾ ಕ್ರೀಡೆಯಾದ ಕಂಬಳ ಕೇವಲ ಕರಾವಳಿಯಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ತನ್ನ ಛಾಪು ಮೂಡಿಸಿದೆ. ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ನಡೆಸಲಾಗುತ್ತಿದ್ದ ಕಂಬಳವನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಆಯೋಜಿಸುವ ಮೂಲಕ ಇಡೀ ರಾಜ್ಯಕ್ಕೆ ಕಂಬಳವನ್ನು ಪರಿಚಯಿಸಲಾಗಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಈ ಕಂಬಳವನ್ನು ಆಯೋಜಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. ಈ ಬಾರಿಯೂ ಬೆಂಗಳೂರಿನಲ್ಲಿ ಕಂಬಳ ಮಾಡುವ ಆಸಕ್ತಿಯನ್ನು ಶಾಸಕರು ಹೊಂದಿದ್ದರೂ, ಕಂಬಳ ಆಯೋಜಿಸಲು ಆಸಕ್ತರಿದ್ದವರಿದ್ದರೆ ಆ ಅವಕಾಶವನ್ನು ನೀಡಲು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾದ ಬಳಿಕ ಕಂಬಳದ ಬಗ್ಗೆ ಆ ಕಂಬಳದ ಹಲವು ಪರ-ವಿರೋಧ ಚರ್ಚೆಗಳು ನಡೆದಿದ್ದವು. ಈ ಹಿನ್ನಲೆಯಲ್ಲಿ ಅಶೋಕ್ ಕುಮಾರ್ ರೈ ಈ ಬಾರಿ ಈ ಆಫರ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಂಬಳ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ವಹಿಸಿದ್ದ ಅಶೋಕ್ ಕುಮಾರ್ ರೈ ಕಂಬಳದಲ್ಲಿ ಭಾಗವಹಿಸಿದ ಎಲ್ಲಾ ಕೋಣಗಳ ಯಜಮಾನರಿಗೆ 70 ಸಾವಿರದಷ್ಟು ಹಣವನ್ನೂ ನೀಡಿ ಪ್ರೋತ್ಸಾಹಿಸಿದ್ದರು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲು ಆಸಕ್ತರಾಗಿರುವವರಿಗೆ ಈ ಅವಕಾಶ ನೀಡಲು ಶಾಸಕ ಅಶೋಕ್ ಕುಮಾರ್ ರೈ ಮುಂದಾಗಿದ್ದಾರೆ.
ಒಂದು ವೇಳೆ ಕಂಬಳ ನಡೆಸಲು ಯಾರೂ ಮುಂದೆ ಬಾರದೇ ಇದ್ದಲ್ಲಿ ತಾವೇ ಕಂಬಳದ ಉಸ್ತುವಾರಿಯನ್ನು ವಹಿಸಲು ನಿರ್ಧರಿಸಿದ್ದಾರೆ. ಕಂಬಳವನ್ನು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ಗಲ್ಫ್ ರಾಷ್ಟ್ರಗಳಿಗೂ ಕೊಂಡೊಯ್ಯಬೇಕು ಎನ್ನುವ ಆಶಯ ಶಾಸಕರದ್ದಾಗಿದೆ. ಬೆಂಗಳೂರಿಗೆ ಕೋಣಗಳನ್ನು ಸಾಗಿಸಲು ಸುಮಾರು 70 ಸಾವಿರ ರೂಪಾಯಿಗಳ ಖರ್ಚು ಇದೆ, ಅದೇ ಗಲ್ಫ್ ರಾಷ್ಟ್ರಗಳಿಗೆ ಸಾಗಿಸಲು ಸುಮಾರು 7 ಲಕ್ಷ ರೂಪಾಯಿಗಳ ಅಂದಾಜು ಖರ್ಚಿದ್ದು, ಇಂಥಹ ಯೋಚನೆಯೂ ತಮ್ಮ ಮುಂದಿದೆ ಎನ್ನುತ್ತಾರೆ ಅಶೋಕ್ ಕುಮಾರ್ ರೈ.