ಆಶ್ರಯ ಮನೆಗಾಗಿ ಇದ್ದ ಮನೆಯನ್ನೂ ಕೆಡವಿ ಬೀದಿಗೆ ಬಿದ್ದ ಬಡ ಕುಟುಂಬ...
ಪುತ್ತೂರು: ಆಶ್ರಯ ಮನೆಯ ಆಸೆಯಲ್ಲಿ, ಇದ್ದ ಮನೆಯನ್ನೂ ಕೆಡವಿ ಬೀದಿಗೆ ಬಿದ್ದ ಬಡ ಕುಟುಂಬವೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಡ್ಯಾ ಎಂಬಲ್ಲಿದೆ. ಮನೆ ಇಲ್ಲದ ಕಾರಣ ಕಳೆದ ಮೂರು ತಿಂಗಳಿನಿಂದ ಈ ಕುಟುಂಬ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲ್ಲೇ ಬದುಕಬೇಕಾದ ಅನಿವಾರ್ಯತೆಯಲ್ಲಿ ಸ್ಥಿತಿಯಲ್ಲಿದೆ.
ಕಡ್ಯ ಗ್ರಾಮದ ಮೋನಪ್ಪ ಎಂಬವರ ಕುಟುಂಬ ಆಶ್ರಯ ಮನೆಗಾಗಿ ಅರ್ಜಿ ಕಳೆದ ವರ್ಷ ಗ್ರಾಮಪಂಚಾಯತ್ ಗೆ ಅರ್ಜಿ ಸಲ್ಲಿಸಿತ್ತು. ಈ ನಡುವೆ ಇತ್ತೀಚೆಗಷ್ಟೇ ಮೋನಪ್ಪ ಕುಟುಂಬಕ್ಕೆ ಆಶ್ರಯ ಮನೆಯನ್ನು ಪಂಚಾಯತ್ ವತಿಯಿಂದ ಮಂಜೂರು ಮಾಡಲಾಗಿತ್ತು. ಆಶ್ರಯ ಮನೆ ಮಂಜೂರಾದ ಹಿನ್ನಲೆಯಲ್ಲಿ ಇದ್ದ ಮನೆಯನ್ನು ಮುರಿದು ಹೊಸ ಮನೆಗೆ ಅಡಿಪಾಯ ಹಾಕಿದ್ದ ಕುಟುಂಬ ಪಂಚಾಯತ್ ಹಣ ಬಿಡುಗಡೆಯಾಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಕೈ ಸಾಲ ಪಡೆದು ಅಡಿಪಾಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.
ಆದರೆ ಅಡಿಪಾಯ ಹಾಕಿ ಮೂರು ತಿಂಗಳು ಕಳೆದರೂ ಮೊದಲ ಕಂತಿನ ಅನುದಾನ ಬಿಡುಗಡೆಯಾಗದ ಕಾರಣ ಮನೆ ನಿರ್ಮಾಣದ ಕೆಲಸವನ್ನು ಮುಂದುವರಿಸಲಾಗದೆ ಅರ್ಧದಲ್ಲೇ ನಿಲ್ಲಿಸಲಾಗಿದೆ. ಹೊಸ ಮನೆಗಾಗಿ ಹಳೆ ಮನೆಯನ್ನು ಮುರಿದು ಹಾಕಿದ್ದ ಮೋನಪ್ಪ ಕುಟುಂಬ ಇದೀಗ ಅತ್ತ ಮನೆಯೂ ಇಲ್ಲ, ಇತ್ತ ಕುಳಿತುಕೊಳ್ಳಲು ಜಾಗವೂ ಇಲ್ಲದ ಸ್ಥಿತಿಯಲ್ಲಿದೆ.
ಸರಿಯಾದ ಮನೆ ಇಲ್ಲದ ಕಾರಣ ಮನೆ ಯಜಮಾನ ಮೋನಪ್ಪರ ಹೆಂಡತಿ ಮತ್ತು ಮಗ ತವರು ಮನೆ ಸೇರಿದ್ದು, ಮೋನಪ್ಪರು ಮಾತ್ರ ಇದೀಗ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲೇ ಜೀವನ ಸಾಗಿಸುವಂತಾಗಿದೆ.
ಮುಂಡೂರು ಪಂಚಾಯತ್ ಗೆ ಸಂಬಂಧಪಟ್ಟವರು ಈ ಭಾಗಕ್ಕೆ ಭೇಟಿ ನೀಡಿದರೂ ಈ ಕುಟುಂಬದ ಸಮಸ್ಯೆಯ ಬಗ್ಗೆ ಮೌನವಹಿಸಿದ್ದು, ಇನ್ನೇನು ಮಳೆಗಾಲ ಸಮೀಪಿಸುತ್ತಿದ್ದು, ಏನು ಮಾಡುವುದು ಎಂದು ತೋಚದ ಕುಟುಂಬ ಸದಸ್ಯರು ಆಕಾಶದ ಕಡೆಗೆ ಕೈ ತೋರಿಸಿಕೊಂಡು ಮರುಗುತ್ತಿದೆ.
