-->
ಫಾಝಿಲ್ ಹತ್ಯೆ ಹಿಂದೂ ಯುವಕರ ಶೌರ್ಯವಲ್ಲ, ಮತಾಂಧರ ಕ್ರೌರ್ಯ: ಸಂತೋಷ್ ಬಜಾಲ್

ಫಾಝಿಲ್ ಹತ್ಯೆ ಹಿಂದೂ ಯುವಕರ ಶೌರ್ಯವಲ್ಲ, ಮತಾಂಧರ ಕ್ರೌರ್ಯ: ಸಂತೋಷ್ ಬಜಾಲ್

 


ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಕೊಲೆಯನ್ನು ಪ್ರತೀಕಾರದ ಕೊಲೆ ಎಂದು ಹೇಳಿಕೆ ನೀಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಂಧನಕ್ಕೆ ಒತ್ತಾಯಿಸಿ ಹಾಗೂ ಫಾಝಿಲ್ ಕೊಲೆ ಪ್ರಕರಣವನ್ನು ಮರು ತನಿಖೆಗೆ ಆಗ್ರಹಿಸಿ ಡಿವೈಎಫ್ಐ ಸಂಘಟನೆ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಇರುವ ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ,  ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ಹೇಳಿಕೆ ನಾಗರಿಕ ಸಮಾಜ ಒಪ್ಪುವಂತದ್ದಲ್ಲ. ಪಾಝಿಲ್ ಕೊಲೆಯು ನೆಟ್ಟಾರ್ ಕೊಲೆಗೆ ಪ್ರತೀಕಾರ ಎಂಬ ಹೇಳಿಕೆಯಿಂದ ಫಾಝಿಲ್ ಕೊಲೆಯಲ್ಲಿ ಶರಣ್ ಪಂಪ್ವೆಲ್ ಪಾತ್ರವೂ ಇವೆ ಎಂಬುದು ಸಾರ್ವಜನಿಕವಾಗಿ ಬಯಲಾಗಿದೆ. ಪೊಲೀಸ್‌ ಇಲಾಖೆ ಈ ಕೂಡಲೇ ಮತೀಯವಾದಿ ಶರಣ್ ಪಂಪ್ ವೆಲ್ ನನ್ನು ಬಂಧಿಸೋದು ಮಾತ್ರವಲ್ಲ ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

‘‘ಬಜರಂಗದಳ ಯಾವತ್ತೂ ಬಡತನ, ಉದ್ಯೋಗ, ವೇತನ, ಆರೋಗ್ಯ, ಶಿಕ್ಷಣ ಮತ್ತು ಜನರ ದಿನನಿತ್ಯದ ಬದುಕಿನ ಸಮಸ್ಯೆಗಳ ವಿರುದ್ದ ಮಾತಾಡೋದಿಲ್ಲ. ಅಂತಹ ವಿಚಾರಗಳಲ್ಲಿ ಮಾತಡೋದು ಡಿವೈಎಫ್ಐ ಸಂಘಟನೆ ಮಾತ್ರ. ನಿಮ್ಮಯ ಮತೀಯ ರಾಜಕಾರಣವನ್ನು ಯಾವುದೇ ಮುಲಾಜಿಲ್ಲದೆ ವಿರೋಧಿಸುತ್ತೇವೆ ಇಂತಹ ಮತೀಯ ರಾಜಕಾರಣದ ವಿರುದ್ಧದ ಹೋರಾಟದಲ್ಲಿ ಸಂಗಾತಿ ಶ್ರೀನಿವಾಸ್ ಬಜಾಲ್, ಭಾಸ್ಕರ್ ಕುಂಬಳೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹುತಾತ್ಮರಾಗಿದ್ದಾರೆ ನೆನಪಿರಲಿ‘‘ ಎಂದು ಎಚ್ಚರಿಸಿದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಶಾಂತಿ ಮತ್ತು ಪ್ರೀತಿಯಿಂದ  ಭಾರತ ಮೇಲೆದ್ದು ಬಂದಿದೆ ಎಂದು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರ ಆಶಯವನ್ನು ಶರಣ್ ಪಂಪ್ ವೆಲ್ ತಿಳಿಯಬೇಕು. ಶರಣ್ ಪಂಪ್ವೆಲ್ ಗೆ ಗೊತ್ತಿರಲಿ ಫಾಝಿಲ್ ಕೊಲೆ ಹಿಂದೂ ಯುವಕರ ಶೌರ್ಯವಲ್ಲ ಅದೊಂದು ಕ್ರೌರ್ಯ. ಇಂತಹ ಹೇಳಿಕೆಯು ಹಿಂದೂ ಸಮಾಜದ ಮೇಲೆ ಕಳಂಕವನ್ನು ತಂದೊಡ್ಡಿದೆ. ಅಮಾಯಕ ಮುಸಲ್ಮಾನರನ್ನು ಕೊಲ್ಲುವುದು ಶೌರ್ಯವೆಂದಾದರೆ ನಿಮ್ಮದೇ ಯುವಕರು ಕೊಲೆ ಮಾಡಿದ ಬಂಟ್ವಾಳದ ಹರೀಶ್ ಪೂಜಾರಿ, ಉಡುಪಿಯ ಪ್ರವೀಣ್ ಪೂಜಾರಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತ ವಿನಾಯಕ ಬಾಳಿಗರನ್ನು ನಡೆಸಿರುವ ಕೊಲೆಗಳೆಲ್ಲಾ ಏನೆನ್ನಬೇಕೆಂದು ಶರಣ್ ಪಂಪ್ವೆಲ್ ಉತ್ತರಿಸಲಿ ಎಂದು ಸವಾಲು ಹಾಕಿದರು.

ಡಿವೈಎಫ್ಐ ಜಿಲ್ಲಾ ಮುಖಂಡರಾದ ಶ್ರೀನಾಥ್ ಕಾಟಿಪಳ್ಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್ಐ ನಗರ ಅಧ್ಯಕ್ಷರಾದ ನವೀನ್ ಕೊಂಚಾಡಿ,  ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ಸಾದಿಕ್ ಕಣ್ಣೂರು, ಅಶ್ಪಕ್ ಅಳೇಕಲ, ಎಸ್ಎಫ್ಐ‌ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಅಸುಂತ ಡಿಸೋಜ, ಯೋಗಿತಾ, ಮುಸ್ತಫಾ ಕಲ್ಲಕಟ್ಟೆ, ಸಾಮಾಜಿಕ ಮುಖಂಡ ಮಹಮ್ಮದ್ ಸಾಲಿ ಬಜಪೆ, ಹನೀಫ್ ಬೆಂಗರೆ, ತಯ್ಯೂಬ್ ಬೆಂಗರೆ, ಜಗದೀಶ್ ಬಜಾಲ್, ನೆಲ್ಸನ್ ರೋಚ್ ಮುಂತಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article