
PUTTUR: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಎನ್ ಐಎಗೆ ಒಪ್ಪಿಸುವಂತೆ ರಾಜ್ಯವ್ಯಾಪಿ ಜನಾಂದೋಲನ
ಪುತ್ತೂರು: ಹಿಂದೂ ಸಂಘಟನೆ ಕಾರ್ಯಕರ್ತ ಬಜರಂಗದಳದ ಗೋ ರಕ್ಷಾ ಪ್ರಮುಖ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯವ್ಯಾಪಿ ಜನಾಂದೋಲನಕ್ಕೆ ವಿಹಿಂಪ ಬಜರಂಗದಳ ಯೋಜನೆ ರೂಪಿಸಿದೆ. ಮೇ 20ಕ್ಕೆ ಮಂಗಳೂರಿನಲ್ಲಿ ಬೃಹತ್ ಜನಾಂದೋಲನ ನಡೆಯಲಿದೆ ಎಂದು ಬಜರಂಗದಳದ ರಾಷ್ಟ್ರೀಯ ಸಂಯೋಜಕ ನೀರಜ್ ದೋನೆರಿಯಾ ಅವರು ಹೇಳಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಹತ್ಯೆ ಹಿಂದೂಗಳನ್ನು ಭಯದ ವಾತಾವರಣಕ್ಕೆ ತಳ್ಳುವ ಮತ್ತು ಧರ್ಮ ರಕ್ಷಣೆ ಮಾಡದಂತೆ ಜೊತೆಗೆ ಜಮ್ಮು ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿ ಮಾಡಿ ಹತ್ಯೆ ಮಾಡಿದ ರೀತಿಯಲ್ಲಿ ನಡೆಸಲಾಗಿದೆ. ಹಾಗಾಗಿ ಸುಹಾಸ್ ಶೆಟ್ಟಿ ಹತ್ಯೆಯು ಕೂಡಾ ಪೂರ್ಣ ಮಟ್ಟದ ಪೂರ್ವಯೋಜನೆ ಮಾಡಿಕೊಂಡು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಹತ್ಯೆಯ ಹಿಂದೆ ನಿಷೇಧಿತ ಸಂಘಟನೆ ಪಿಎಫ್ಐ ಕಾರ್ಯಕರ್ತರು ಭಾಗಿಯಾಗಿದ್ದು, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಿಂದ ಹಣಕಾಸು ಪೂರೈಕೆಯಾಗಿದೆ. ಸ್ಲೀಪರ್ ಸೆಲ್ ಮಾದರಿಯಲ್ಲಿ ಈ ಹತ್ಯೆ ನಡೆದಿದೆ. ಹಾಗಾಗಿ ಯಾವುದೇ ಒತ್ತಡಕ್ಕೆ ಒಳಗಾಗದೇ ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಈ ಕುರಿತು ಸ್ವತಃ ಸುಹಾಸ್ ಅವರ ತಂದೆ ಮೊಹನ್ ಶೆಟ್ಟಿ, ತಾಯಿ ಸುಲೋಚನಾ ಶೆಟ್ಟಿ ಅವರು ತನಿಖೆಯನ್ನು ಎನ್ಐಎಗೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಯಾಕೆಂದರೆ ಈ ಹಿಂದೆ ನಡೆದ ಹರ್ಷ ಮತ್ತು ಪ್ರವೀಣ್ ನೆಟ್ಟಾರು ಹತ್ಯೆಯು ಇದೇ ರೀತಿ ನಡೆದಿದೆ ಜೊತೆಗೆ ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ದುಷ್ಕರ್ಮಿಗಳು ಮತ್ತೆ ಬಜರಂಗದಳದ ಭರತ್ ಮತ್ತು ಶರಣ್ ಪಂಪ್ವೆಲ್ ಅವರಿಗೂ ಕೊಲೆ ಬೆದಿಕೆಯೊಡ್ಡಿದ್ದಾರೆ. ಹಾಗಾಗಿ ತನಿಖೆಯನ್ನು ಎನ್ಐಗೆ ವಹಿಸುವಂತೆ ರಾಜ್ಯವ್ಯಾಪಿ ಜನಾಂದೋಲನಕ್ಕೆ ವಿಹಿಂಪ ಬಜರಂಗದಳ ಯೋಜನೆ ರೂಪಿಸಿದೆ. ಮೇ 20ಕ್ಕೆ ಮಂಗಳೂರಿನಲ್ಲಿ ಬೃಹತ್ ಜನಾಂದೋಲನ ನಡೆಯಲಿದೆ ಎಂದು ಅವರು ಹೇಳಿದರು.
ಹತ್ಯೆಗೆ ರಾಜಕೀಯ ಕೈವಾಡ:
ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆ ರಾಜಕೀಯ ಕೈವಾಡವೂ ಇದೆ. ಯಾಕೆಂದರೆ ಸುಹಾಸ್ ಶೆಟ್ಟ ಹತ್ಯೆಯಾದ ಬಳಿಕ ಇಲ್ಲಿನ ತನಕ ಅವರ ಮನೆಗೆ ಸರಕಾರದಿಂದ ಜನಪ್ರತಿನಿಧಿಗಳು ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ. ಜೊತೆಗೆ ಯಾವುದೇ ಆರ್ಥಿಕ ನೆರವನ್ನೂ ನೀಡಿಲ್ಲ. ಆದರೆ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ ಎನ್ನುವ ಪೊಲೀಸರು ಆರೋಪಿಗಳಿಗೆ ಮುಖಗವಸು ಹಾಕಿ ಮಾದ್ಯಮದ ಮುಂದೆ ತೋರಿಸಿದ್ದಾರೆ. ಆದರೆ ಮುಖಗವಸಿನ ಒಳಗೆ ನಿಜವಾಗಿ ಕೊಲೆ ಮಾಡಿದ ಆರೋಪಿ ಇದ್ದಾರೋ ಇಲ್ಲವೂ ನಮಗೆ ಅನುಮಾನ ಶುರುವಾಗಿದೆ. ಹಾಗಾಗಿ ಹತ್ಯೆಗೆ ರಾಜಕೀಯ ಕೈವಾಡ ಇದೆಯೇ ಎಂಬ ಸಂಶಯ ಮೂಡಿದೆ. ಫಾಝೀಲ್ ಹತ್ಯೆಯ ಸಂದರ್ಭ ಅವರ ಮನೆಗೆ ಕಾಂಗ್ರೆಸ್ ಸರಕಾರ ರೂ.25ಲಕ್ಷ ನೆರವು ನೀಡಿದೆ. ಅದೇ ಹಿಂದೂವಾಗಿ ಗೋ ರಕ್ಷಣೆ ಮಾಡುತ್ತಿದ್ದ ಸುಹಾಸ್ ಶೆಟ್ಟಿ ಹತ್ಯೆಯಾದ ಸಂದರ್ಭ ಯಾವುದೇ ನೆರವು ನೀಡದೆ ಸರಕಾರ ಮುಸ್ಲಿಮ್ ಪರ ನಿಂತಿದೆ ಎಂದು ನೀರಜ್ ದೋನೆರಿಯಾ ಆರೋಪಿಸಿದ್ದಾರೆ.
ಎಚ್ಚೆತ್ತುಕೊಳ್ಳದ ಪೊಲೀಸರು:
ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರಂಬಂಜನ್ ಸೂರ್ಯ ಅವರು ಮಾತನಾಡಿ, ಸುಹಾಸ್ ಶೆಟ್ಟಿ ಹತ್ಯೆಗೂ ಮುಂದೆ ಸಾಮಾಜಿಕ ಜಾಲತಾಣದಲ್ಲಿ ಸುಹಾಸ್ ಶೆಟ್ಟಿಯವರಿಗೆ ಕೊಲೆ ಬೆದರಿಕೆ, ದಮ್ಕಿ ಹಾಕುವ ಪೋಸ್ಟರ್ ಹರಿದಾಡುತ್ತಿತ್ತು. ಅಷ್ಟಾದಾರೂ ಕೂಡಾ ಪೊಲೀಸರು ಆಗ ಎಚ್ಚೆತ್ತುಕೊಂಡಿಲ್ಲ. ಜೊತೆಗೆ ಪೊಲೀಸ್ ಸೇರಿದಂತೆ ಕೆಲವು ಜನಪ್ರತಿನಿಧಿಗಳು ಕೂಡಾ ಇದರಲ್ಲಿ ಶಾಮೀಲಾಗಿರುಬಹುದು. ಆಗಲೇ ಪೊಲೀಸರು ಎಚ್ಚೆತ್ತಕೊಂಡಿದ್ದರೆ ಸುಹಾಸ್ ಶೆಟ್ಟಿಯನ್ನು ಉಳಿಸಬಹುದಿತ್ತು. ಕಳೆದ ದಿನವು ಕೆಲವು ದಿನಗಳ ಬಳಿಕ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಟಾರ್ಗೆಟ್ ಮಾಡಲಾಗಿದೆ. ವಿಶ್ವಹಿಂದೂ ಪರಿಷತ್ನ ಪ್ರಾಂತ ಸಂಯೋಜಕ ಶರಣ್ ಪಂಪ್ವೆಲ್, ಬಜರಂಗದಳದ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು ಅವರಿಗೆ ಬೆದರಿಕೆ ಪೋಸ್ಟರ್ ಹಾಕುವ ಕೆಲಸವನ್ನು ಜಿಹಾದಿಗಳು ಮಾಡುತ್ತಿದ್ದಾರೆ. ಆದರೆ ಇಂತಹ ಗೊಡ್ಡು ಬೆದರಿಕೆಗಳಿಗೆ ಕುಗ್ಗುವ ಜಾಯಮಾನ ನಮ್ಮ ಸಂಘಟನೆಯದಲ್ಲ. ಕೆಲವು ದಿನಗಳ ಹಿಂದೆ ರಾಜ್ಯದ ಗೃಹಮಂತ್ರಿಗಳು ಮಾಧ್ಯಮದ ಮೂಲಕ ಆಂಟಿಕಮ್ಯುನಲ್ ಫೋರ್ಸ್ ಅನ್ನು ಮಂಗಳೂರಿನಲ್ಲಿ ಸ್ಥಾಪನೆ ಮಾಡುವ ಕುರಿತು ಹೇಳಿಕೆ ನೀಡಿದ್ದಾರೆ. ಪ್ರಚೋದನೆ ಮಾಡುವವರನ್ನು ಬಂಧಿಸುತ್ತೇನೆ ಎಂದು ತಿಳಿಸಿದ್ದಾರೆ. ಆದರೆ ಅವರ ಹೇಳಿಕೆಯಂತೆ ಸೂಕ್ಷ್ಮವವಾಗಿ ಗಮನಿಸಿದಾಗ ಹತ್ಯೆ ಮಾಡುವ ಪೋಸ್ಟರ್ ಹಾಕುವವರು ಯಾರನ್ನು ಪ್ರಚೋದನೆ ಮಾಡುತ್ತಿದ್ದಾರೆ. ಆ ಪ್ರಚೋದನೆ ಮಾಡುವವರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ಅವರು ಗೋ ಕಳ್ಳತನ ಮಾಡಿದ ವ್ಯಕ್ತಿಗೆ ಪೊಲೀಸರೇ ಶೂಟ್ ಮಾಡಿದಾಗ ಆತನ ಮನೆಗೆ ರೂ. 25ಲಕ್ಷ ಕೊಟ್ಟ ಸರಕಾರ ಇವತ್ತು ಸುಹಾಸ್ ಶೆಟ್ಟಿಯ ಬಗ್ಗೆ ರೌಡಿ ಶೀಟರ್ ವಿಚಾರ ಮಾಡುತ್ತಾರೆ ಎಂದರೆ ಅದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು. ಬಜರಂಗದಳ ಪ್ರಾಂತ ಸಹಸಂಯೋಜಕ ಗೋವರ್ಧನ್, ಮಂಗಳೂರು ವಿಭಾಗ ಸಂಯೋಜಕ ಪುನಿತ್ ಅತ್ತಾವರ, ವಿಶ್ವಹಿಂದು ಪರಿಷದ್ ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ, ಹರೀಶ್ ದೋಳ್ಪಾಡಿ ಉಪಸ್ಥಿತರಿದ್ದರು.