ಮಂಗಳೂರು: ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ನಿಧನ; ರಾತ್ರಿ 8 ಗಂಟೆಗೆ ಅಂತ್ಯ ಸಂಸ್ಕಾರ
ಮಂಗಳೂರು:
ಹಿರಿಯ ಸಾಹಿತಿ,
ಕಾಂದಬರಿಗಾರ್ತಿ ಸಾರಾ ಅಬೂಬಕ್ಕರ್ ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸ್ತ್ರೀಪರ ಹಾಗೂ ಬಂಡಾಯ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅವರು, ಹತ್ತು ಹಲವು ಜನಪರ ಚಳುವಳಿಗಳಲ್ಲೂ
ಗುರುತಿಸಿಕೊಂಡಿದ್ದರು. ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾಗಿದ್ದರು.
ವಯೋಸಹಜ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಾರಾ ಅಬೂಬಕ್ಕರ್ (86) ಅವರು ಮಂಗಳವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಕಾಸರಗೋಡಿನ ಚಂದ್ರಗಿರಿಯವರಾದ ಅವರು ಜೂ.30, 1936 ಜನಿಸಿದ್ದರು. 10 ಕ್ಕೂ ಹೆಚ್ಚು ಕಾದಂಬರಿ, 6 ಕಥಾ ಸಂಕಲನ, 5 ಬಾನುಲಿ ನಾಟಕ, 4 ಲೇಖನ, ಒಂದು ಪ್ರವಾಸ ಕಥನ ಬರೆದಿದ್ದ ಸಾರಾ 11 ಕ್ಕೂ ಹೆಚ್ಚು ಪ್ರಶಸ್ತಿ ಗೆ ಭಾಜನರಾಗಿದ್ದರು.
ಮುಸ್ಲಿಂ
ಹೆಣ್ಣುಮಕ್ಕಳಿಗೆ ಶಿಕ್ಷಣ ವಿಚಾರ, ಸ್ತ್ರೀ ಶೋಷಣೆ, ತ್ರಿವಳಿ ತಲಾಖ್
ಹಾಗೂ ‘ವಹ್ಹಾಬಿಸಂ‘ ವಿರುದ್ಧ ಬಹುದೊಡ್ಡ ಧ್ವನಿಯಾಗಿ ಗುರುತಿಸಿಕೊಂಡಿದ್ದರು. ಪ್ರಸ್ತುತ ಮಂಗಳೂರಿನ
ಹ್ಯಾಟ್ ಹಿಲ್ ನಲ್ಲಿ ಅವರು ನೆಲೆಸಿದ್ದರು. ಮನೆಯಲ್ಲಿ ಅವರ ಅಂತಿಮ ದರ್ಶನ ನಡೆದು, ಬಳಿಕ ರಾತ್ರಿ
8 ಗಂಟೆಗೆ ಮಂಗಳೂರು ನಗರದ ಮಸೀದಿಯೊಂದರಲ್ಲಿ ಅಂತಿಮ
ಸಂಸ್ಕಾರ ನಡೆಯಲಿದೆ.