
NDRF: ಪುತ್ತೂರು ಹಾಗೂ ಮಡಿಕೇರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಆಗಮನ!!
Monday, May 26, 2025
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನಾದ್ಯಂತ ಮಳೆ ಆರ್ಭಟ ಜೋರಾಗಿದೆ. ಹಾಗಾಗಿ ಸದ್ಯ ಸ್ಥಿತಿಗತಿಗೆ ಅನುಗುಣವಾಗುವಂತೆ ಪರಿಸ್ಥಿತಿ ನಿರ್ವಹಣೆಗಾಗಿ ಪುತ್ತೂರಿಗೆ ಎನ್ ಡಿ ಆರ್ ಎಫ್ ತಂಡ ಆಗಮಿಸಿದೆ.
ಸುಮಾರು 25 ಜನರನ್ನೊಳಗೊಂಡ ಎನ್ ಡಿ ಆರ್ ಎಫ್ ತಂಡದವರಿಗೆ ಸದ್ಯ ಪುತ್ತೂರಿನ ಎಪಿಎಂಸಿ ಸಭಾಂಗಣದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಪುತ್ತೂರನ್ನ ಕೇಂದ್ರವಾಗಿರಿಸಿ ಎನ್ ಡಿ ಆರ್ ಎಫ್ ತಂಡದವರು ಕಾರ್ಯನಿರ್ವಹಿಸಲಿದ್ದು, ಮಳೆಯಿಂದ ಹೆಚ್ಚು ಹಾನಿಗೊಳಗಾದ ಬೆಳ್ತಂಗಡಿ, ಕಡಬ, ಬಂಟ್ವಾಳ, ಸುಳ್ಯ ಭಾಗದಲ್ಲಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳೊಂದಿಗೆ ಎನ್ ಡಿ ಆರ್ ಎಫ್ ತಂಡ ಆಗಮಿಸಿದ್ದು, ಇವರೊಂದಿಗೆ ಒಂದು ಶ್ವಾನವೂ ಆಗಮಿಸಿದೆ. ಕಾರ್ಯಾಚರಣೆ ವೇಳೆ ಅಪಾಯಕ್ಕೊಳಗಾದವರನ್ನ ಪತ್ತೆಹಚ್ಚುವಂತ ಶ್ವಾನ ಇದಾಗಿದೆ. ಹಾಗೆಯೇ ಎರಡು ತಂಡವಾಗಿ ಪುತ್ತೂರು ಹಾಗೂ ಮಡಿಕೇರಿಗೆ ಎನ್ ಡಿ ಆರ್ ಎಫ್ ತಂಡ ಆಗಮಿಸಿದೆ. ಇದರಲ್ಲಿ ಮಡಿಕೇರಿಗೆ ಸುಮಾರು 30 ಸದಸ್ಯರನ್ನೊಳಗೊಂಡ ತಂಡ ಆಗಮಿಸಿದೆ.